ದಾವಣಗೆರೆ : ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಬಾಂಬೆ ಬಾಯ್ಸ್ ಮತ್ತೆ ಕಾಂಗ್ರೆಸ್ ಪಕ್ಷವನ್ನು ಸೇರುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಹೌದು, ದಾವಣಗೆರೆಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, ರಾಜಕೀಯ ಎಂದ ಮೇಲೆ ಪಕ್ಷಾಂತರ ಮಾಮೂಲು. ಅಲ್ಲಿದ್ದವರು ಇಲ್ಲಿಗೆ ಬರುತ್ತಾರೆ, ಇಲ್ಲಿದ್ದವರು ಅಲ್ಲಿಗೂ ಹೋಗುತ್ತಾರೆ. ಚುನಾವಣೆಗೆ ಇನ್ನೂ 1 ವರ್ಷ ಕಾಲಾವಕಾಶವಿದ್ದು, ಕಾಂಗ್ರೆಸ್ ಪಕ್ಷದಿಂದ ಪಕ್ಷಾಂತರವಾಗಿರುವ ಅಷ್ಟೂ ಮಂದಿ ವಾಪಸ್ ಬಂದೇ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಮಾಸ್ ಲೀಡರ್:-
ಇನ್ನು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನಂ.1 ನಾಯಕ. ಮಾಸ್ ಲೀಡರ್ ಕೂಡ ಹೌದು. ರಾಜ್ಯ ಕಾಂಗ್ರೆಸ್ ನಾಯಕರ ಪೈಕಿ ಅವರು ಟಾಪ್ ಮೋಸ್ಟ್ ನಾಯಕರಾಗಿದ್ದು, ರಾಜ್ಯದಲ್ಲಿ ಅವರು ತಮ್ಮದೇ ಆದ ಸ್ವಂತ ವರ್ಚಸ್ಸನ್ನೂ ಹೊಂದಿದ್ದಾರೆ. ಹಾಗಾಗಿ ಅವರು ನಿಶಕ್ತರಾಗುವ ಪ್ರಶ್ನೆಯೇ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಸಿದ್ದು ವರ್ಚಸ್ಸು ಕುಂದುತ್ತಿದೆಯೇ ಎಂದು ಪತ್ರಕರ್ತರು ಶಾಸಕ ಸತೀಶ್ ಜಾರಕಿಹೊಳಿ ಅವರನ್ನು ಪ್ರಶ್ನಿಸಿದ್ದರು.