ಚಿತ್ರದುರ್ಗ: ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ದ ಹೊಳಲ್ಕೆರೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗ ದಲ್ಲಿ ಶಾಸಕ ಚಂದ್ರಪ್ಪ ಅವರು, ಯಾರೋ ಒಬ್ಬನು ಬಂದ, ಎಲ್ಲಿಂದಲೋ ಬಂದ, ಇಲ್ಲಿನ ವ್ಯವಸ್ಥೆ ಬಗ್ಗೆ ಗೊತ್ತಿಲ್ಲ, ಏನೋ ಹೇಳಿಕೆ ಕೊಟ್ಟ ಎಂದು ಹೇಳಿದ್ದು, ಯೊಗೇಶ್ವರ ಒಬ್ಬ ಹುಚ್ಚ. ತಿನ್ನಲು ಕೂಳಿಲ್ಲದವನಿಗೆ ಹೋಳಿಗೆ ಕೊಟ್ಟರೆ ತಲೆತಿಕ್ಕಲು ಎಂಬಂತಾಗಿದೆ ಎಂದು ಯೋಗಿಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇನ್ನು, ಅವನಿಗೆ ತಿನ್ನಲು ಮುದ್ದೆ ಇರಲಿಲ್ಲ, ಪರಿಸ್ಥಿತಿ ಸರಿ ಇರಲಿಲ್ಲ. ಸೋತಿದ್ದ ಯೊಗೀಶ್ವರ್ ರಾಮನಗರ ಉಸ್ತುವಾರಿ ವಹಿಸಿಕೊಂಡಿದ್ದ. ರಾಮನಗರಕ್ಕೆ ನಿಲ್ಲಿಸಿದ ಅಭ್ಯರ್ಥಿ ಪಲಾಯನ ಮಾಡಿದ್ದ. ಅನಿತಾ ಕುಮಾರಸ್ವಾಮಿ ವಿರುದ್ಧದ ಅಭ್ಯರ್ಥಿಯನ್ನು ಇವನೇ ಓಡಿಸಿದ್ದ ಎಂದು ಶಾಸಕ ಚಂದ್ರಪ್ಪ ಹೇಳಿದ್ದಾರೆ.
ಅಂಥವನಿಗೆ ನಮ್ಮ ಮುಖಂಡರು ಎಂಎಲ್ ಸಿ, ಮಂತ್ರಿ ಮಾಡಿದ್ದಾರೆ. ಸಿ.ಪಿ.ವೈ ನಮ್ಮ ಮುಂದೆ ಬಚ್ಚಾ. ಅವನೇನು ದೊಡ್ಡ ಮನುಷ್ಯ ಅಂತ ನಾನು ಅವನ ಬಗ್ಗೆ ಮಾತಾಡಲಿ ಎಂದು ಹೇಳಿದ್ದು, ಅವನು ಏನಾದರು ಹೇಳುವುದಿದ್ದರೆ ಹೇಳಲಿ ಜನ ಕಷ್ಟದಲ್ಲಿದ್ದಾರೆ, ಸಾವು ನೋವಿನ ಈ ಸಂದರ್ಭದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ನಾವು ಕೆಲಸ ಮಾಡಬೇಕಾಗಿದ್ದು, ಒಟ್ಟಾಗಿ ರಾಜ್ಯದಿಂದ ಮಹಾಮಾರಿ ಕೊರೊನಾ ಓಡಿಸಬೇಕಿದೆ ಎಂದು ಶಾಸಕ ಚಂದ್ರಪ್ಪ ಹೇಳಿದ್ದಾರೆ.