ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಮುಗಿದರೂ ಅರಮನೆ ನಗರಿ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ವಾರದ ಕೊನೆ ದಿನ ಭಾನುವಾರ ಮೈಸೂರಿನ ರಸ್ತೆಗಳಲ್ಲಿ ಕಿಕ್ಕಿರಿದು ಜನರು ತುಂಬಿದ್ದರು.
ದಸರಾ ಹಿನ್ನೆಲೆ ಅರಮನೆ ಸೇರಿ ನಗರದಾದ್ಯಂತ ಮಾಡಿರುವ ವಿದ್ಯುತ್ ದೀಪಗಳ ಅಲಂಕಾರ ಹಾಗೂ ವಸ್ತು ಪ್ರದರ್ಶನ, ಮೃಗಾಲಯಕ್ಕೆ ಭೇಟಿ ನೀಡಿದ ಪ್ರವಾಸಿಗರು ಮೈಸೂರಿನ ಸೌಂದರ್ಯವನ್ನು ಕಣ್ತುಂಬಿಕೊಂಡರು.
ಈ ಬಾರಿ ದಸರಾ ಆರಂಭಕ್ಕೆ ಎರಡು ದಿನ ಮುನ್ನವೇ ಮೈಸೂರಿಗೆ ಪ್ರವಾಸಿಗರು ಭೇಟಿ ನೀಡಲು ಆರಂಭಿಸಿದರು. ಅ.3 ರಂದು ದಸರಾ ಉದ್ಘಾಟನೆಯಾದರೂ ಅ.1ರಿಂದಲೇ ಪ್ರವಾಸಿಗರು ಹಿಂಡು ಹಿಂಡಾಗಿ ಮೈಸೂರು ಕಡೆಗೆ ಬರಲಾರಂಭಿಸಿದರು. ಪ್ರಾಯೋಗಿಕವಾಗಿ ಆರಂಭವಾದ ವಿದ್ಯುತ್ ದೀಪಾಲಂಕಾರ ಕಣ್ತುಂಬಿಕೊಳ್ಳಲು ರಾಜ್ಯ ಮತ್ತು ಹೊರ ರಾಜ್ಯದಿಂದ ಆಗಮಿಸುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗತೊಡಗಿದೆ.
ಮೃಗಾಲಯಕ್ಕೆ1.79 ಲಕ್ಷ ಜನ ಭೇಟಿ:
ಅರಮನೆಗೆ ಅ.3 ರಿಂದ 10 ರವರೆಗೆ ಒಟ್ಟಾರೆಯಾಗಿ 1,12,070 ಮಂದಿ ಭೇಟಿ ನೀಡಿದರೆ, ಮೃಗಾಲಯಕ್ಕೆ ಅ.3 ರಿಂದ 12ರವರೆಗೆ 1,79,100 ಮಂದಿ ಭೇಟಿ ನೀಡಿದ್ದಾರೆ. ದಸರಾ ಉದ್ಘಾಟನೆಯ ದಿನ ಅಂದರೆ ಅ.3ರ ಮೊದಲ ದಿನ ಖಾಸಗಿ ದರ್ಬಾರ್ ನಡೆಯುತ್ತಿದ್ದ ಕಾರಣಕ್ಕೆ ಕೆಲಕಾಲ ಅರಮನೆ ಪ್ರವೇಶ ನಿರ್ಬಂಧಿಸಲಾಗಿತ್ತು. ಈ ಅವಧಿಯನ್ನು ಹೊರತುಪಡಿಸಿ ಉಳಿಕೆ ಅವಧಿಯಲ್ಲಿ ಒಟ್ಟು 7,129 ಮಂದಿ ಅರಮನೆಗೆ ಭೇಟಿ ನೀಡಿದ್ದಾರೆ. ಇನ್ನೂ ಕೆಲದಿನಗಳ ಕಾಲ ವಿದ್ಯುತ್ ದೀಪಗಳ ಅಲಂಕಾರ ಇರಲಿದ್ದು, ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.