ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್ ಅಥವಾ ಸಿದ್ದರಾಮಯ್ಯ ಸರ್ಕಾರವಿಲ್ಲ. ಬದಲಾಗಿ ಮುಸ್ಲಿಂ ಮತ್ತು ಜಮೀರ್ ಅಹ್ಮದ್ ಖಾನ್ ಸರ್ಕಾರವಿದ್ದು, ಆತ ರಾಷ್ಟ್ರ ದ್ರೋಹಿಯಾಗಿದ್ದು, ಪಾಕಿಸ್ತಾನದಲ್ಲಿ ಹುಟ್ಟಬೇಕಿತ್ತು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಠ-ಮಂದಿರ ಹಾಗೂ ರೈತರ ಆಸ್ತಿಯ ದಾಖಲೆಗಳಲ್ಲಿ ವಕ್ಫ್ ಹೆಸರು ಬರೆಸುತ್ತಾರಲ್ಲ ಎಷ್ಟು ಸೊಕ್ಕು ಇರಬೇಕು. 2018ರಲ್ಲಿ ಯರಕಲ್ ಸಿದ್ದರಾಮ ಮಠಕ್ಕೆ ವಕ್ಫ್ ಆಸ್ತಿ ಅಂತಾ ನೋಟೀಸ್ ಕೊಟ್ಟಿದ್ದಾರೆ. ವಕ್ಫ್ ಅಧಿಕಾರಿಗಳ ದೃಷ್ಟಿಯಲ್ಲಿ ಜಮೀರ್ ಸಿಎಂ ಆಗಿದ್ದಾರೆ. ಮುಖ್ಯಮಂತ್ರಿಗೆ ಗೊತ್ತಿಲ್ಲದೇ ನೋಟೀಸ್ ಕೊಟ್ಟಿದ್ದಾರಾ? ಎಂದು ಕಿಡಿಕಾರಿದರು.
ಜಮೀರ್ ಪಾಕಿಸ್ತಾನದಲ್ಲಿ ಇದ್ದಾನೋ, ಹಿಂದುಸ್ತಾನದಲ್ಲಿದ್ದಾನೋ? ರಾಷ್ಟ್ರ ದ್ರೋಹಿ ಜಮೀರ್ ಪಾಕಿಸ್ತಾನದಲ್ಲಿ ಹುಟ್ಟಬೇಕಿತ್ತು. ಅಪ್ಪಿತಪ್ಪಿ ಹಿಂದುಸ್ತಾನದಲ್ಲಿ ಹುಟ್ಟಿದ್ದಾನೆ. ಆತ ಮಂತ್ರಿಯಾಗಲು ಅಯೋಗ್ಯ. ಮೊದಲು ಅವನನ್ನು ಕಿತ್ತು ಬಿಸಾಕಿ. ಮಠ ಮಂದಿರ, ದೇವಸ್ಥಾನ, ಸಾಧು ಸಂತರ ಆಸ್ತಿ ವಾಪಸ್ ಕೊಡಿ. ದಲಿತರು, ಕುರುಬರು ನಿಮಗೆ ಓಟು ಹಾಕಿಲ್ವಾ?, ನಿಮಗೆ ರೈತರ, ಬೀರ ದೇವರ ಶಾಪ ತಟ್ಟದೆ ಬಿಡಲ್ಲ. ಶಾಪ ತಟ್ಟಬಾರದು ಅಂದ್ರೆ ರೈತರ ಭೂಮಿ ಉಳಿಸಿಕೊಡಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಆಗ್ರಹ ಮಾಡಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ, ಸವದತ್ತಿ ಯಲ್ಲಮ್ಮ, ಹಾಸನಾಂಬೆ ಆಶೀರ್ವಾದ ನಿಮಗೆ ಸಿಗಬೇಕು ಅಂದ್ರೆ, ರೈತರ ಭೂಮಿಗಳನ್ನು ಬಿಡಿಸಿಕೊಡಲಿ. ಇಲ್ಲದಿದ್ದರೆ ದೇವರ ಶಾಪ ತಟ್ಟುತ್ತದೆ. ಜೈಲಿಗೆ ಹೋಗಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ಆಸ್ತಿ ಬಿಟ್ಟು ಹೋಗಬಾರದು ಅಂದ್ರೆ 3 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಿ. ಹಿಂದೂಪರ ಇರುವ ವ್ಯಕ್ತಿಗಳಿಗೆ ಮತ ಹಾಕಿ ಎಂದು ಕರೆ ನೀಡಿದರು.