ಜೈಪುರ: ಪ್ರಸ್ತುತ ಹಿಂದೂ ಯುವಕರು ತಮ್ಮ ರೋಲ್ ಮಾಡೆಲ್ ಎಂದು ಬಿಂಬಿಸುತ್ತಿರುವ ಹಾಗೂ ಧರ್ಮ ವಿರೋಧಿಗಳಿಗೆ ಖಡಕ್ ಎಚ್ಚರಿಕೆ ನೀಡುತ್ತಿರುವ ಲಾರೆನ್ಸ್ ಬಿಷ್ನೋಯಿ ಹತ್ಯೆಗೆ ಕರ್ಣಿ ಸೇನೆ ಸಿದ್ಧತೆ ನಡೆಸಿದೆ ಎನ್ನುವ ಸೂಚನೆ ದೊರೆತಿದೆ.
ಹೌದು, ಗುಜರಾತ್ನಲ್ಲಿ ಜೈಲುವಾಸ ಅನುಭವಿಸುತ್ತಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿಯನ್ನು ಎನ್ಕೌಂಟರ್ನಲ್ಲಿ ಹತ್ಯೆಗೈಯ್ಯುವ ಪೊಲೀಸರಿಗೆ ಬರೋಬ್ಬರಿ ₹1,11,11,111 ನೀಡುವುದಾಗಿ ರಜಪೂತರ ಕ್ಷತ್ರಿಯ ಕರ್ಣಿ ಸೇನೆಯ ಅಧ್ಯಕ್ಷ ರಾಜ್ ಶೇಖಾವತ್ ಅವರು ಘೋಷಿಸಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ಬಿಷ್ಣೋಯಿ ಬಂಟರು ರಜಪೂತ ನಾಯಕ ಸುಖದೇವ್ ಸಿಂಗ್ ಗೊಗಾಮೆಡಿ ಕೊಲೆ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ ಸೇನೆ ನಾಯಕ ರಾಜ್ ಶೆಖಾವತ್ ಈ ಘೋಷಣೆ ಮಾಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಗೊಗಾಮೆಡಿ ಜೈಪುರದ ತನ್ನ ಮನೆಯಲ್ಲಿ ಚಹಾ ಸೇವಿಸುತ್ತಿದ್ದಾಗ 2 ಬಂದೂಕುಧಾರಿಗಳು ಹಾಡಹಗಲೇ ಅವರನ್ನು ಗುಂಡಿಕ್ಕಿ ಕೊಂದಿದ್ದರು. ಇದರ ಬೆನ್ನಲ್ಲೇ, ಬಿಷ್ಣೋಯಿ ಜತೆಗಾರ ಹಾಗೂ ಗೋಲ್ಡಿ ಬ್ರಾರ್ ಗ್ಯಾಂಗ್ನ ಸದಸ್ಯ ರೋಹಿತ್ ಗೊದಾರಾ ಈ ಹತ್ಯೆಯ ಹೊಣೆ ಹೊತ್ತುಕೊಂಡಿದ್ದ. ಇದು ರಾಜಸ್ಥಾನದಲ್ಲಿ ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಿ, ನ್ಯಾಯಕ್ಕೆ ಆಗ್ರಹಿಸಿ ಪ್ರತಿಭಟನೆಗಳು ಭುಗಿಲೆದ್ದವು.
ಪ್ರಕರಣ ಸಂಬಂಧ ಅಶೋಕ್ ಮೇಘ್ವಾಲ್ ಎಂಬ ಪ್ರಮುಖ ಆರೋಪಿಯನ್ನು ಬಂಧಿಸಿದ ಪೊಲೀಸರು, ರಾಜಸ್ಥಾನ ಹಾಗೂ ಹರ್ಯಾಣದ 31 ಕಡೆಗಳಲ್ಲಿ ಶೋಧ ನಡೆಸಿ ಪಿಸ್ತೂಲು ಸಂಗ್ರಹ, ಮದ್ದುಗುಂಡು, ಮೊಬೈಲ್, ಸಿಮ್ಗಳು, ಡಿಜಿಟಲ್ ವಿಡಿಯೋ ರೆಕಾರ್ಡರ್ ಹಾಗೂ ಹಣಕಾಸು ಸಂಬಂಧಿತ ಕಡತಗಳನ್ನು ವಶಪಡಿಸಿಕೊಂಡಿದ್ದರು. ಆದರೆ ಗೊದಾರಾ ಪತ್ತೆ ಇನ್ನೂ ಸಾಧ್ಯವಾಗಿಲ್ಲ