ಬಳ್ಳಾರಿ: ಇಲ್ಲಿನ ಜೈಲಿನಲ್ಲಿರುವ ಚಿತ್ರದುರ್ಗ ರೇಣುಕಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಅವರ ಬೆನ್ನುನೋವಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಿದ್ದು, ಸಿಟಿ ಸ್ಕ್ಯಾನ್ ಹಾಗೂ ಎಂಆರ್ಐ ಸ್ಕ್ಯಾನ್ ಮಾಡಿಸುವಂತೆ ಬಿಮ್ಸ್ ವೈದ್ಯರು ಸೂಚಿಸಿದ್ದಾರೆ.
ನಗರದ ಕೇಂದ್ರ ಕಾರಾಗೃಹದಲ್ಲಿ ಬಿಮ್ಸ್ನ ನರಶಸ್ತ್ರಚಿಕಿತ್ಸಾ ತಜ್ಞ ಡಾ.ವಿಶ್ವನಾಥ್ ಅವರು ನಟ ದರ್ಶನ್ ಆರೋಗ್ಯ ತಪಾಸಣೆ ಮಾಡಿದ್ದು, ಸ್ಕ್ಯಾನಿಂಗ್ ಮಾಡಿಸಿ, ಸೂಕ್ತ ಚಿಕಿತ್ಸೆಯ ಅಗತ್ಯವಿದೆ. ಫಿಜಿಯೋಥೆರಪಿ ಮಾಡಬೇಕು ಎಂದು ಸಲಹೆ ನೀಡಿದ್ದು, ಬೆನ್ನುನೋವು ನಿವಾರಣೆಗೆ ಮಾತ್ರೆಗಳನ್ನು ನೀಡಿದ್ದಾರೆ.
ಫಿಜಿಯೋಥೆರಪಿಗೆ ನಟ ದರ್ಶನ್ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಸಿಟಿ ಸ್ಕ್ಯಾನ್ ಹಾಗೂ ಎಂಆರ್ಐ ಸ್ಕ್ಯಾನ್ಗೆ ಒಪ್ಪುತ್ತಿಲ್ಲ ಎಂದು ಜೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೂಲಗಳ ಪ್ರಕಾರ ನಟ ದರ್ಶನ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಬೆನ್ನುನೋವು ಹಾಗೂ ಕಾಲುನೋವಿನ ಬಾಧೆ ಮತ್ತಷ್ಟು ಬಿಗಡಾಯಿಸಿದೆ. ಶಸ್ತ್ರಚಿಕಿತ್ಸೆ ಅಗತ್ಯವಿದೆ. ಹೀಗಾಗಿಯೇ ದರ್ಶನ್ಗೆ ಮೆಡಿಕಲ್ ಬೆಡ್ ಹಾಗೂ ಚೇರ್ ನೀಡುವಂತೆಯೂ ವೈದ್ಯರು ಸೂಚಿಸಿದ್ದಾರೆ.
ಅಭಿಮಾನಿಗಳ ಕಾಟಕ್ಕೆ ಎಚ್ಚರಿಕೆ ಹೆಜ್ಜೆ:
ನಟ ದರ್ಶನ್ ಸ್ಕ್ಯಾನಿಂಗ್ ಮಾಡಿಸಲು ಬಿಮ್ಸ್ ಆಸ್ಪತ್ರೆಗೆ ದಾಖಲಾದರೆ ನಟನ ಅಭಿಮಾನಿಗಳು ಬಿಮ್ಸ್ ಆಸ್ಪತ್ರೆಗೆ ಬರುವ ಸಾಧ್ಯತೆಯಿದೆ. ಇದರಿಂದಾಗಿ ಬೇರೆ ರೋಗಿಗಳಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದಲೇ ಸ್ಥಳೀಯ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಹಾಗೂ ಶಸ್ತ್ರಚಿಕಿತ್ಸೆ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸ್ಕ್ಯಾನಿಂಗ್ ಮಾಡಿಸಿಕೊಳ್ಳುವಂತೆ ನಟನ ಮನವೊಲಿಸಲಗುತ್ತಿದೆ. ಆದರೆ, ದರ್ಶನ್ ಇದಕ್ಕೆ ನಿರಾಕರಿಸುತ್ತಿದ್ದಾರೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.