ಬಹುಭಾಷಾ ನಟಿ ಮೀನಾ ಮನೆಯಲ್ಲಿ ವಿಷಾದವೊಂದು ಸಂಭವಿಸಿದ್ದು, ಮೀನಾ ಅವರ ಪತಿ ವಿದ್ಯಾಸಾಗರ್ ಅವರು ಮೃತಪಟ್ಟಿದ್ದಾರೆ. ಕೋವಿಡ್ ನಂತರದ ಅನಾರೋಗ್ಯದ ಕಾರಣದಿಂದ ವಿದ್ಯಾಸಾಗರ್ ಅವರನ್ನು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ. ಈ ಘಟನೆ ನಂತರ ಮೀನಾ ಅವರ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.
ನಟಿ ಮೀನಾ ಅವರು ಕನ್ನಡದ ಪುಟ್ನಂಜ, ಮೊಮ್ಮಗ, ಚೆಲುವ, ಶ್ರೀ ಮಂಜುನಾಥ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.
ಪಾರಿವಾಳದಿಂದ ನಟಿ ಮೀನಾ ಪತಿ ಸಾವು?
ಇನ್ನು, ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಸಾವಿಗೆ ಪಾರಿವಾಳದ ಸೋಂಕು ಕಾರಣ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ. ಅವರ ಮನೆಯ ಸಮೀಪ ಸಾಕಷ್ಟು ಪಾರಿವಾಳಗಳಿದ್ದು, ತ್ಯಾಜ್ಯ ಮಿಶ್ರಿತ ಗಾಳಿಯನ್ನು ಸೇವನೆ ಮಾಡಿದ್ದರಿಂದ ಮನೆಯಲ್ಲಿದ್ದವರೆಲ್ಲ ಶ್ವಾಸಕೋಶಕ್ಕೆ ಸೋಂಕು ತಗುಲಿದೆ.
ಆದರೆ, ಕೊರೋನಾ ನಂತರದ ಅನಾರೋಗ್ಯ ಕಾರಣದಿಂದ ವಿದ್ಯಾಸಾಗರ್ಗೆ ತೊಂದರೆ ಹೆಚ್ಚಾಯಿತು. ವೈದ್ಯರು ಶ್ವಾಸಕೋಶ ಬದಲಾಯಿಸಲು ಪ್ರಯತ್ನಿಸಿದರು, ಆದರೆ ಅಂಗಾಂಗ ದಾನಿಗಳು ಸಿಗಲಿಲ್ಲ ಎನ್ನಲಾಗಿದೆ.
ಇನ್ನು, ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಸಾವಿಗೆ ನಟ ಶರತ್ ಕುಮಾರ್ ಸೇರಿದಂತೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.




