ಪುನೀತ ಪರ್ವದಲ್ಲಿ ಸೂಪರ್ಸ್ಟಾರ್ಗಳು ವಿಭಿನ್ನ ಕಾರಣವೊಂದಕ್ಕೆ ಒಂದಾಗಿದ್ದಾರೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ‘ಅಪ್ಪು ಆ್ಯಂಬುಲೆನ್ಸ್’ ಸೇವೆ ಆರಂಭಿಸಲಾಗುವುದು. ಈಗಾಗಲೇ ಮೊದಲ ಆ್ಯಂಬುಲೆನ್ಸ್ ಮೈಸೂರಿನಲ್ಲಿ ಓಡಾಡುತ್ತಿದೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿದರು.
ಹೌದು, ಬೆಂಗಳೂರಿನಲ್ಲಿ ನಡೆದ ‘ಗಂಧದ ಗುಡಿ ಪ್ರಿ ರಿಲೀಸ್ ಈವೆಂಟ್’ ನಲ್ಲಿ ಮಾತನಾಡಿದ ನಟ ಪ್ರಕಾಶ್ ರಾಜ್ ಅವರು, “ಅಪ್ಪು ಅಗಲಿದಾಗ ಅದನ್ನು ಅರಗಿಸಿಕೊಳ್ಳಲು ನನ್ನಿಂದ ಆಗಲಿಲ್ಲ ಅಪ್ಪು ಇಲ್ಲ ಎನ್ನುವುದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಅಪ್ಪು ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ, ಬರೀ ಮಾತನಾಡದೆ, ಅಪ್ಪು ಹೆಸರಿನಲ್ಲಿ ಏನಾದರು ಮಾಡಬೇಕಲ್ಲ ಎಂದು ನನ್ನ ಮನಸ್ಸು ಹೇಳುತಿತ್ತು. ಶಿವಣ್ಣ ಮನೆಗೆ ಹೋಗಿ ಅಪ್ಪು ಹೆಸರಿನಲ್ಲಿ ಆ್ಯಂಬುಲೆನ್ಸ್ ಮಾಡಬೇಕು ಎಂದು ಹೇಳಿದೆ.
ಆಗ ಅವರು, ನೀನೊಬ್ಬನೆ ಯಾಕೆ ಮಾಡ್ತಿಯಾ? ನಾನು ಒಂದು ಆ್ಯಂಬುಲೆನ್ಸ್ ಕೊಡ್ತೀನಿ ಅಂದ್ರು. ಬಳಿಕ ನಟ ಸೂರ್ಯ, ಚಿರಂಜೀವಿ, ಯಶ್ ಎಲ್ಲರೂ ನನ್ನ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಶೀಘ್ರದಲ್ಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಪ್ಪು ಆ್ಯಂಬುಲೆನ್ಸ್ ಓಡಾಡಲಿದೆ ಎಂದರು.
ಇನ್ನು, ಇದಾದ ನಂತರ ಮಾತನಾಡಿದ ನಟ ರಾಕಿಂಗ್ ಸ್ಟಾರ್ ಯಶ್ ಉಳಿದ ಆ್ಯಂಬುಲೆನ್ಸ್ಗಳನ್ನು ಯಶೋಮಾರ್ಗದಿಂದ ನೀಡುವುದಾಗಿ ಭರವಸೆ ನೀಡಿದ್ದಾರೆ.