ಸಂಚಾರಿ ವಿಜಯ್ ಹಿನ್ನಲೆ: ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಇವರ ಮೂಲ ಹೆಸರು ಬಿ.ವಿಜಯ್. ಇವರು ‘ಸಂಚಾರಿ’ ನಾಟಕ ತಂಡದಲ್ಲಿದ್ದಿದ್ದರಿಂದ ಇವರಿಗೆ ಸಂಚಾರಿ ಎಂಬ ಹೆಸರು ಬಂದಿತ್ತು.
ಇವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ರಂಗಾಪುರ ಗ್ರಾಮದಲ್ಲಿ 1983ರ ಜು.17ರಂದು ಜನಿಸಿದ್ದರು. ವಿಜಯ್ ಅವರದ್ದು ಕಲಾ ಕುಟುಂಬವಾಗಿದ್ದು, ತಂದೆ ಬಸವರಾಜಯ್ಯ ಸಂಗೀತ ವಾದ್ಯ ನುಡಿಸುತ್ತಿದ್ದರೆ, ತಾಯಿ ಗೌರಮ್ಮ ಜಾನಪದ ಕಲಾವಿದರಾಗಿದ್ದರು. ವಿಜಯ್ ಬೆಂಗಳೂರಿನ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ಉಪನ್ಯಾಸಕ ವೃತ್ತಿಗೆ ವಿದಾಯ ಹೇಳಿ, ನಾಟಕ ತಂಡದಲ್ಲಿ 10 ವರ್ಷ ಕಲಾ ಸೇವೆ ನೀಡಿದ್ದ ವಿಜಯ್, ‘ರಂಗಪ್ಪ ಹೋಗ್ಬಿಟ್ನಾ’ ಚಿತ್ರಕ್ಕೆ ಬಣ್ಣ ಹಚ್ಚುವ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿದ್ದರು. ಇವರು ಇತ್ತೀಚೆಗೆ ‘ಹತ್ಯಾರ’ ಚಿತ್ರದಲ್ಲಿ ಅಭಿನಯಿಸುತ್ತಿದ್ದರು.
ಸಂಚಾರಿ ವಿಜಯ್ ಸಿನಿ ಪಯಣ ಹೀಗಿತ್ತು..
ಭಿನ್ನ ಪಾತ್ರಗಳಿಂದ ಮನೆ ಮಾತಾಗಿದ್ದ ಸಂಚಾರಿ ವಿಜಯ್ ಸಿಕ್ಕ ಸೀಮಿತ ಅವಕಾಶದಲ್ಲೇ ಅಭಿನಯ ಸಾಮರ್ಥ್ಯ ತೋರಿಸಿದವರು. ನಾನು ಅವನಲ್ಲ ಅವಳು ಸಿನಿಮಾದ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದಿರುವ ವಿಜಯ್, ಹರಿವು, ಒಗ್ಗರಣೆ, ಕೃಷ್ಣ ತುಳಸಿ, ಆಟಕ್ಕುಂಟು ಲೆಕ್ಕಕ್ಕಿಲ್ಲ, ವಿಲನ್, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕಿಲ್ಲಿಂಗ್ ವೀರಪ್ಪನ್, ಅಲ್ಲಮ, ನಾತಿಚರಾಮಿ, ಆ್ಯಕ್ಟ್ 1978 ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು.
ಸಂಚಾರಿ ‘ವಿಜಯ’ ಸಾಧನೆ:
ಪ್ರತಿಭೆಯ ಜೊತೆಗೆ ಮಾನವೀಯ ಗುಣಗಳಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ನಟ ಸಂಚಾರಿ ವಿಜಯ್, ಕೋವಿಡ್ ಸಂಕಷ್ಟದಲ್ಲಿ ಅಸಂಖ್ಯಾತರ ಕಷ್ಟಕ್ಕೆ ಸ್ಪಂದಿಸಿದ್ದರು. ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ ವಿಜಯ್ ಪ್ರತಿಭಾನ್ವಿರಾಗಿದ್ದು, 2014ರಲ್ಲಿ ಅವರು ನಟಿಸಿದ ಹರಿವು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ‘ನಾನು ಅವನಲ್ಲ.. ಅವಳು’ ಚಿತ್ರದ ನಟನೆಗೆ ಮತ್ತೊಮ್ಮೆ ರಾಷ್ಟ್ರ ಪ್ರಶಸ್ತಿ ಪಡೆದ ಬಳಿಕ ವಿಜಯ್ ಅವರಿಗೆ ಅವಕಾಶಗಳು ಹೆಚ್ಚಾಗಿದ್ದವು. ಇಂತಹ ಹೊತ್ತಲ್ಲಿ ವಿಜಯ್ ಅವರು ಮೃತಪಟ್ಟಿರುವುದು ದುರದೃಷ್ಟಕರ.