ರಾಮನಗರ: ಜಿಲ್ಲೆಯ ಮಾಗಡಿ ಪಟ್ಟಣದ ಕೆರೆಯಲ್ಲಿ ವ್ಯಕ್ತಿಯೊಬ್ಬರ ಶವ, ಮೂಟೆ ಕಟ್ಟಿ ಬಿಸಾಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಮೂಟೆಯಲ್ಲಿ ಸಿಕ್ಕ ಸಣ್ಣ ಸುಳಿವಿನ ಜಾಡು ಹಿಡಿದು ಹೊರಟ ಪೊಲೀಸರು ಕೊನೆಗೂ ಕೊಲೆಗಾರರನ್ನ ಜೈಲಿಗಟ್ಟಿದ್ದಾರೆ. ಆದರೆ, ಅತ್ತ ಮಗ ನಾಪತ್ತೆಯಾಗಿದ್ದಾನೆ ಹುಡುಕಿಕೊಡಿ ಎಂದು ಕಂಪ್ಲೇಟ್ ಕೊಟ್ಟಿದ್ದ ಪೋಷಕರಿಗೆ ಸಿಕ್ಕಿದ್ದು ಮಾತ್ರ ಕೊಳೆತ ಸ್ಥಿತಿಯಲ್ಲಿ ಮಗನ ಶವ.
ಬೆಂಗಳೂರಿನ ಬನಶಂಕರಿಯ ಸರಬಂಡೆ ಪಾಳ್ಯದ ಯುವಕ ದಿವಾಕರ್ ಕೊಲೆಯಾದ ವ್ಯಕ್ತಿಯಾಗಿದ್ದು,ಜನವರಿ 20 ರಂದು ಚಿನ್ನ ಖರೀದಿಸಿ ಬರುವೆ ಎಂದು ಮನೆಯಿಂದ 5 ಲಕ್ಷ ರೂಪಾಯಿ ತೆಗದುಕೊಂಡು ಹೋಗಿದ್ದ ವ್ಯಕ್ತಿ ವಾಪಸ್ ಬಂದಿರಲಿಲ್ಲ. ಕಡಿಮೆ ಬೆಲೆಗೆ ಚಿನ್ನ ಕೊಡ್ತೀವಿ ಅಂತಾ ಕರೆದ ದುಷ್ಕರ್ಮಿಗಳು ಸುಂಕದಕಟ್ಟೆಯಲ್ಲಿ ದಿವಾಕರ್ನನ್ನು ಕೊಂದು ಶವವನ್ನು ಮೂಟೆಕಟ್ಟಿ ಬೈಕ್ ಸಮೇತ ಮಾಗಡಿ ಕೆರೆಯಲ್ಲಿ ಎಸೆದು ಪರಾರಿಯಾಗಿದ್ದರು.
ಇದ್ಯಾವುದರ ಮಾಹಿತಿ ಗೊತ್ತಿಲ್ಲದ ಪಾಲಕರು, ಮಗ ದಿವಾಕರ್ ನಾಪತ್ತೆಯಾಗಿದ್ದಾನೆ ಎಂದು ದೂರು ನೀಡಿದ್ದು, ಇತ್ತ ಪೊಲೀಸರು ದಿವಾಕರ್ಗಾಗಿ ಹುಡುಕಾಟ ನಡೆಸುತ್ತಿದ್ದರು. ಅತ್ತ ಮಾಗಡಿ ಕೆರೆಯಲ್ಲಿ ಮೂಟೆ ಕಟ್ಟಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು.