ಬೆಂಗಳೂರು : ದೇಶದಲ್ಲಿ ಹೊಸ ಸ್ವರೂಪದ ಕೊರೋನಾ ವೈರಸ್ ಬಗ್ಗೆ ಆತಂಕವಿಲ್ಲ. ಹಾಗಾಗಿ, ಶಾಲೆ ಪ್ರಾರಂಭಿಸುವ ತೀರ್ಮಾನವನ್ನು ಮುಂದೂಡುವ ಸಾಧ್ಯತೆ ಇಲ್ಲ. ಆದರೂ ಇಂದು ಮತ್ತೊಂದು ಸುತ್ತಿನ ಸಭೆ ನಡೆಸಿ ಹಲವು ವಿಷಯಗಳನ್ನು ಚರ್ಚಿಸಲಾಗುವುದು ಎಂದು ಶಿಕ್ಷಣ ಸಚಿವ ಎಸ್.ಸುರೇಶ್ಕುಮಾರ್ ಬೆಂಗಳೂರಿನಲ್ಲಿ ಹೇಳಿದ್ದಾರೆ.
ಹೌದು ಖಾಸಗಿ ಚಾನಲ್ ವೊಂದರಲ್ಲಿ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಮುಂದಿನ ತಿಂಗಳು ಜನವರಿ 1 ರಿಂದ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಆರಂಭಗೊಳ್ಳಲಿದ್ದು, 6 ರಿಂದ 9ನೇ ತರಗತಿವರೆಗೆ ವಿದ್ಯಾಗಮ ಕಾರ್ಯಕ್ರಮ ಸಹ ಆರಂಭವಾಗಲಿದೆ ಎಂದು ಹೇಳಿದ್ದಾರೆ.
ಶಾಲೆ ಆರಂಭಕ್ಕೆ 1 ವಾರ ಬಾಕಿಯಿದ್ದು, ತಜ್ಞರೊಂದಿಗೆ ಸಭೆ ನಡೆಸಿ ಹೊಸ ಸ್ವರೂಪದ ರೂಪಾಂತರಗೊಂಡ ಕೊರೋನಾ ವೈರಸ್ ಬಗ್ಗೆ ಸಂಪೂರ್ಣವಾಗಿ ಚರ್ಚಿಸಿ, ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದು, ಇಂದು ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ನಿರ್ದೇಶನಗಳನ್ನು ನೀಡಲಾಗುವುದು ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ.