ಜಗಳೂರು: ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನಲ್ಲಿ ಹಲವು ವರ್ಷಗಳಿಂದ ಮಾನವ ಹಾಗೂ ಕಾಡುಪ್ರಾಣಿಗಳ ಸಂಘರ್ಷ ಮುಂದುವರಿದೆ. ಸಂರಕ್ಷಿತ ಅರಣ್ಯ ಪ್ರದೇಶದ ಅಕ್ಕಪಕ್ಕದ ಹಳ್ಳಿಗಳ ರೈತರು ಕರಡಿ, ಹಂದಿಗಳ ದಾಳಿಗಳಿಂದ ಹತ್ತಾರು ವರ್ಷಗಳ ಕಾಲ ಹೈರಾಣಾಗಿದ್ದಾರೆ.
ಏಷ್ಯದಲ್ಲೇ ಅಪರೂಪದ ಕೊಂಡುಕುರಿ ಅರಣ್ಯಧಾಮ ಹೊಂದಿರುವ ಜಗಳೂರಿನಲ್ಲಿ ಕಾಡುಪ್ರಾಣಿಗಳು ಹಾಗೂ ರೈತರ ನಡುವಿನ ಸಂಘರ್ಷ ನಡೆಯುತ್ತಿದ್ದು, ಮಳೆಗಾಲದಲ್ಲಿ ಬೆಳೆ ಕಾಪಾಡಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಹಲವು ವರ್ಷಗಳಿಂದ ಇದೇ ಪ್ರತಿಸ್ಥಿತಿ ಮುಂದುವರಿದ್ದು, ಈವರೆಗೆ ನೂರಾರು ಎಕರೆ ಬೆಳೆ ನಷ್ಟ ಸಂಭವಿಸಿದೆ ಎಂದು ರೈತರು ದೂರಿದ್ದಾರೆ.
ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಿನ ಸುತ್ತ ಸೂಕ್ತ ತಂತಿಬೇಲಿ ಹಾಕಿದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಕೊಂಡುಕುರಿ ಅರಣ್ಯಧಾಮಕ್ಕೆ ಸರ್ಕಾರದಿಂದ ಕೊಟ್ಯಂತರ ರೂಪಾಯಿ ಅನುದಾನ ಬರುತ್ತದೆ. ಅದರಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಇಚ್ಛಾಶಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಕಾಡಿನಿಂದ ಬರುವ ಹಂದಿಗಳು ಜೋಳ, ಮೆಕ್ಕೇಜೋಳ, ಶೇಂಗಾ ಜಮೀನುಗಳಿಗೆ ನುಗ್ಗಿ ದಾಂಧಲೆ ಮಾಡುತ್ತಿವೆ. ಇದರಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಅಳಲು ತೋಡಿಕೊಂಡಿದ್ದಾರೆ.
ಕರಡಿ ದಾಳಿ: ಬೇಸಿಗೆ ವೇಳೆ ಕರಡಿಗಳು ಆಹಾರ ಅರಸಿ ವಿವಿಧೆಡೆ ಅಲೆಯುತ್ತವೆ. ಈ ವೇಳೇ ಕುರಿಗಾಹಿಗಳು ಹಾಗೂ ರೈತರ ಮೇಲೆ ದಾಳಿ ನಡೆಸುತ್ತವೆ.