ದಾವಣಗೆರೆ ಜೂ.06 :ಮಲೇಬೆನ್ನೂರು ಪುರಸಭೆ ವತಿಯಿಂದ 2022-23ನೇ ಸಾಲಿನ ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಸ್ವಯಂ ಉದ್ಯೋಗ ಕಾರ್ಯಕ್ರಮದಡಿ, ವ್ಯಕ್ತಿಗತ ಉದ್ಯಮಶೀಲತೆ (ಸಾಲ ಮತ್ತು ಸಹಾಯಧನ), ಗುಂಪು ಉದ್ಯಮ ಕಾರ್ಯಕ್ರಮದಡಿ, ಸ್ವ-ಸಹಾಯ ಗುಂಪುಗಳ ಬ್ಯಾಂಕ್ ಕ್ರೆಡಿಟ್ ಲಿಂಕೇಜ್ ಕಾರ್ಯಕ್ರಮದಡಿ ಸಾಲ ಪಡೆಯಲು, ಕೌಶಲ್ಯಾಭಿವೃದ್ಧಿ ಮೂಲಕ ಉದ್ಯೋಗ ಮತ್ತು ಸ್ಥಳ ನಿಯುಕ್ತಿ ಕಾರ್ಯಕ್ರಮದಡಿ ವಿವಿಧ ತರಬೇತಿಯನ್ನು ಪಡೆಯಲು, ಸ್ವ-ಸಹಾಯ ಸಂಘಗಳನ್ನು ರಚಿಸಲು ಆಸಕ್ತಿ ಹೊಂದಿದ ಬಡತನ ರೇಖೆಗಿಂತ ಕೆಳಗಿರುವ ಮಲೇಬೆನ್ನೂರು ಪಟ್ಟಣದ ನಿವಾಸಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಫಲಾನುಭವಿಗಳು ಅರ್ಜಿಯೊಂದಿಗೆ ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಅನುಭವ ಪ್ರಮಾಣ ಪತ್ರ, ವಿದ್ಯಾರ್ಹತೆ ದಾಖಲಾತಿ ಪತ್ರ ಲಗತ್ತಿಸಿ ಅರ್ಜಿಯನ್ನು ದ್ವಿಪತ್ರಿಯಲ್ಲಿ ಜೂನ್ 30 ರ ಒಳಗಾಗಿ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ಸಂಬಂಧಪಟ್ಟ ಶಾಖೆಯಲ್ಲಿ ವಿಚಾರಿಸಬಹುದಾಗಿದೆ ಎಂದು ಮಲೇಬೆನ್ನೂರು ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.