ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನವದೆಹಲಿಯ ಪಕ್ಷದ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸೋನಿಯಾ ಗಾಂಧಿ, ಖರ್ಗೆ ಅವರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ.
ಪಕ್ಷದ ಬಹುತೇಕ ಎಲ್ಲಾ ಹಿರಿಯ ನಾಯಕರು ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ದೀಪಾವಳಿ ನಿಮಿತ್ತ ಭಾರತ್ ಜೋಡೋ ಯಾತ್ರೆಗೆ 3 ದಿನ ವಿರಾಮ ನೀಡಲಾಗಿದ್ದು, ರಾಹುಲ್ ಭಾಗಿಯಾಗಲಿದ್ದಾರೆ. ಅಧ್ಯಕ್ಷ ಚುನಾವಣೆಯಲ್ಲಿ ಶಶಿ ತರೂರ್ ಅವರನ್ನು ಖರ್ಗೆ ಮಣಿಸಿದ್ದರು.
AICC ಅಧ್ಯಕ್ಷ ಸ್ಥಾನಕ್ಕೆ 2ನೇ ದಲಿತ ನಾಯಕ ಖರ್ಗೆ:
ದಲಿತ ಸಮುದಾಯದಿಂದ ಜಗಜೀವನ್ ರಾಮ್ ನಂತರ ಕಾಂಗ್ರೆಸ್ ಅಧ್ಯಕ್ಷರಾದ ಎರಡನೇ ನಾಯಕ ಮಲ್ಲಿಕಾರ್ಜುನ ಖರ್ಗೆ. 24 ವರ್ಷಗಳ ಬಳಿಕ ಗಾಂಧಿಯೇತರರು ಪಕ್ಷದ ಚುಕ್ಕಾಣಿ ಹಿಡಿಯುತ್ತಿರುವುದು ಇದೇ ಮೊದಲು. ಖರ್ಗೆ ಈ ಹುದ್ದೆಗೇರಿದ ಕರ್ನಾಟಕ ಎರಡನೇ ರಾಜಕಾರಣಿಯಾಗಿದ್ದಾರೆ.
ಈ ಹಿಂದೆ 1968ರಲ್ಲಿ ನಿಜಲಿಂಗಪ್ಪ ಅಧ್ಯಕ್ಷರಾಗಿದ್ದರು. ಇನ್ನು, ಸೋನಿಯಾ ಗಾಂಧಿ (1998-2017), ರಾಹುಲ್ ಗಾಂಧಿ (2017- 2019) ಪಕ್ಷದ ಅಧ್ಯಕ್ಷರಾಗಿದ್ದರು. ಬಳಿಕ ಸೋನಿಯಾ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆದಿದ್ದರು.
ತವರು ರಾಜ್ಯದ್ದೇ ಖರ್ಗೆಗೆ ದೊಡ್ಡ ಸವಾಲು!
ಕಾಂಗ್ರೆಸ್ ಅಧ್ಯಕ್ಷನಾಗಿರುವ ಮಲ್ಲಿಕಾರ್ಜುನ ಖರ್ಗೆಗೆ ರಾಜ್ಯದಲ್ಲಿ ಬಣ ರಾಜಕೀಯವನ್ನು ಮಟ್ಟ ಹಾಕುವುದೇ ದೊಡ್ಡ ಸವಾಲಾಗಿದೆ. ವಿಧಾನಸಭೆ ಚುನಾವಣೆಗೆ ಮುನ್ನ, ರಾಜ್ಯದಲ್ಲಿ ಬಣದಿಂದ ಕೂಡಿರುವ ಪಕ್ಷವನ್ನು ಒಗ್ಗೂಡಿಸಬೇಕಿದೆ.
ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಬಣದ ನಾಯಕರು ಬಹಿರಂಗವಾಗಿ, ಮುಂದಿನ ಸಿಎಂ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಬ್ರೇಕ್ ಹಾಕಬೇಕಿದೆ. ಇಬ್ಬರು ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ನಡೆಸಬೇಕಿದೆ.
ಮಲ್ಲಿಕಾರ್ಜುನ ಖರ್ಗೆ ಮುಂದಿರುವ ಸವಾಲುಗಳು:
➤ ಹಿಮಾಚಲ ಪ್ರದೇಶ, ಗುಜರಾತ್, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು.
➤ ದೇಶದಲ್ಲಿ ಪಕ್ಷವನ್ನು ಬಲಪಡಿಸುವುದು.
➤ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹವನ್ನು ಹೆಚ್ಚಿಸುವುದು.
➤ ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟಿಸುವುದು.
➤ ಸೋನಿಯಾ-ರಾಹುಲ್ ಅವರ ರಿಮೋಟ್ ಕಂಟ್ರೋಲ್ ಅಧ್ಯಕ್ಷ ಎನ್ನುವ ಆರೋಪದಿಂದ ಹೊರಬರುವುದು.
➤ G23 ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು.