ದಾವಣಗೆರೆ : ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು,ಸುಮಾರು 5.53 ಲಕ್ಷ ಟನ್ ಮೆಕ್ಕೆಕೋಳ ಉತ್ಪಾದನೆಯಾಗುವ ನಿರೀಕ್ಷೆಯಿದ್ದು, ರೈತರ ಹಿತದೃಷ್ಠಿ ಹಾಗೂ ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಒತ್ತಡಗಳು ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸೋಣ ಎಂದು ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿಂದು ನಡೆದ ಆಹಾರ ಸರಬರಾಜು ಇಲಾಖೆ, ಎ.ಪಿ.ಎಂ.ಸಿ, ಕೃಷಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಈ ವರ್ಷ 1.31 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದ್ದು, ಅದಕ್ಕೆ ತಕ್ಕಂತೆ ಮಳೆ ಬಿದ್ದಿದ್ದು ಮೆಕ್ಕೆಜೋಳ ಎಲ್ಲಾ ತಾಲ್ಲೂಕುಗಳಲ್ಲಿ ಬಹಳ ಚನ್ನಾಗಿದೆ ನಾವು ಹೊದಕಡೆಯಲ್ಲಾ ರೈತರು, ರೈತ ಮುಖಂಡರು ಹಾಗೂ ರೈತ ಸಂಘದವರು ಮನವಿಗಳನ್ನು ನೀಡುತ್ತಿದ್ದು, ಖರೀದಿ ಕೇಂದ್ರಕ್ಕೆ ಆಗ್ರಹಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಹೇಳಿದರು.
ನಾನೂ ಕೂಡ ಮೊನ್ನೆ ನಡೆದ ಮುಖ್ಯಮಂತ್ರಿಗಳ ವಿಡಿಯೋ ಕಾನ್ಪರೆನ್ಸ್ ಕಾರ್ಯಕ್ರಮದಲ್ಲಿ ಜಿಲ್ಲೆಯ ರೈತರ ಹಿತದೃಷ್ಠಿಯಿಂದ ಮೆಕ್ಕೆಜೋಳ ಖರೀದಿ ಕೇಂದ್ರಕ್ಕಾಗಿ ಮನವಿ ಮಾಡಿದ್ದೇನೆ ಹಾಗಾಗಿ ಪ್ರಸ್ತಾವನೆ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸೋಣ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪಿ.ಡಿ.ಎಸ್ ನಲ್ಲಿ ಮೆಕ್ಕೆಜೋಳ ವಿತರಿಸಲು ಬರುವುದಿಲ್ಲ ಹಾಗಾಗಿ ಸರ್ಕಾರ ಖರೀದಿಸುತ್ತಿಲ್ಲ ಆದರೆ ರೈತರು ಬೇಡಿಕೆಯಂತೆ ಜೋಳದ ಬೇರೆ ಬೇರೆ ಉತ್ಪನ್ನಗಳ ತಯಾರಿಸಬಹುದೆಂಬ ಅಂಶವನ್ನು ಉಲ್ಲೇಖಿಸಿ ಪತ್ರ ಬರೆಯೋಣ ಎಂದು ಹೇಳಿದರು.
ಆಹಾರ ಇಲಾಖೆಯ ಜಂಟಿ ನಿರ್ದೇಶಕ ಮಂಟೆಸ್ವಾಮಿ ಮಾಹಿತಿ ನೀಡಿ ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ 1850 ಬೆಂಬಲ ಬೆಲೆ ಘೋಷಿಸಿದೆ. ಆದರೆ ಮಾರ್ಕೆಟ್ನಲ್ಲಿ ಅದಕ್ಕಿಂತ ಕಡಿಮೆ 1400 ಕ್ಕೆ ಮಾರಾಟ ಆಗುತ್ತಿದೆ. ಇನ್ನು ಹೊಸ ಬೆಳೆ ಬಂದರೆ ದರ ಮತ್ತಷ್ಟು ಕಡಿಮೆಯಾಗುವ ಸಂಭವವಿದ್ದು ಸರ್ಕಾರ ಖರೀದಿ ಕೇಂದ್ರ ಆರಂಭಿಸಿದರೆ ಅನುಕೂಲವಾಗಲಿದೆ ಎಂದರು. ಸಭೆಯಲ್ಲಿ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಕೃಷಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಚಿಂತಾಲ್ ಹಾಗೂ ಎಪಿಎಂಸಿಯ ಕಾರ್ಯದರ್ಶಿ ದೊರೆಸ್ವಾಮಿ ಮತ್ತು ಇನ್ನಿತರರು ಉಪಸ್ಥಿತರಿದ್ದರು.