ಬೆಳಗಾವಿ: ಸ್ಕೂಲ್ ಬ್ಯಾಗ ತರಲು ನಿರಾಕರಿಸಿದ ಸಹಪಾಠಿ ಮೇಲೆ ಚಾಕುವಿನಿಂದ ದಾಳಿ ನಡೆಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಜಿಲ್ಲೆಯ ಗೋಕಾಕ್ ನ ವಾಲ್ಮೀಕಿ ಮೈದಾನದಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಸರ್ಕಾರಿ ಪ್ರೌಢ ಶಾಲೆಯ ಮೂವರು ವಿದ್ಯಾರ್ಥಿಗಳಿಂದ ಚಾಕು ಇರಿತ ನಡೆದಿದೆ.
10ನೇ ತರಗತಿ ಓದುತ್ತಿದ್ದ ಪ್ರದೀಪ್ ಬಂಡಿವಡ್ಡರ ಎಂಬಾತನ ಮೇಲೆ ದಾಳಿ ನಡೆದಿದೆ. ಸಹಪಾಠಿಗಳಾದ ರವಿ, ಅಶೊಕ, ಸಿದ್ಧಾರ್ಥ ಎನ್ನುವ ವಿದ್ಯಾರ್ಥಿಗಳು ಈ ಕೃತ್ಯ ಎಸಗಿದ್ದಾರೆ. ಶಾಲೆಯಲ್ಲಿನ ತಮ್ಮ ಬ್ಯಾಗ ತರಲು ನಿರಾಕರಿಸಿದ್ದಕ್ಕೆ ಪ್ರದೀಪ್ನ ಕುತ್ತಿಗೆ, ಕೈ,ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾರೆ.
ತೀವ್ರ ರಕ್ತಸ್ರಾವದಿಂದ ಬಿದ್ದು ನರಳಾಡುತ್ತಿದ್ದ ಪ್ರದೀಪ್ ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹಲ್ಲೆ ನಡೆಸಿ ಪರಾರಿಯಾದ ವಿದ್ಯಾರ್ಥಿಗಳಿಗಾಗಿ ಗೋಕಾಕ್ ನಗರ ಪೋಲಿಸರು ಶೋಧ ಕೈಗೊಂಡಿದ್ದಾರೆ.