ಹೊಸಪೇಟೆ(ವಿಜಯನಗರ)ಆ.18: ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಚಿರಬಿ ಮತ್ತು ರಾಂಪುರ ಗ್ರಾಮಗಳಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ಹಿತದೃಷ್ಟಿಯಿಂದ ಆ.21ರಿಂದ ಆ.25ರವರೆಗೆ ನಡೆಯುವ ಶ್ರೀ ಮೂಗಬಸವೇಶ್ವರ ಸ್ವಾಮಿಯ ರಥೋತ್ಸವ ಹಾಗೂ ಮುಂತಾದ ಕಾರ್ಯಕ್ರಮಗಳನ್ನು ನಿಷೇದಿಸಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರು ಆದೇಶ ಹೊರಡಿಸಿದ್ದಾರೆ..
ಚಿರಬಿ ಹೊರವಲಯದಲ್ಲಿ ಬರುವ ಶ್ರೀ ಮೂಗಬಸವೇಶ್ವರ ಸ್ವಾಮಿಯ ರಥೋತ್ಸವವು ಶ್ರಾವಣ ಮಾಸದ ಕೊನೆಯ ಸೋಮವಾರದಂದು ಆಚರಿಸುತ್ತಾ ಬರಲಾಗುತ್ತಿದ್ದು, ಜಾತ್ರಾ ಮಹೋತ್ಸವ ವೇಳೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ರಾಂಪುರ ಹಾಗೂ ಚಿರಬಿ ಗ್ರಾಮಸ್ಥರ ನಡುವೆ ಭಿನ್ನಾಭಿಪ್ರಾಯಗಳಿದ್ದು, ಮುಂಜಾಗ್ರತಾ ಕ್ರಮವಾಗಿ ಕೊಟ್ಟೂರು ಸಿಪಿಐ ಮತ್ತು ಪಿಎಸ್ಐ ಅವರು ಆ.07, ಆ.08 ಮತ್ತು ಆ.10ರಂದು ಎರಡು ಗ್ರಾಮಗಳ ಮುಖಂಡರೊಂದಿಗೆ ಮೂರು ಬಾರಿ ಶಾಂತಿ ಸಭೆಯನ್ನು ಏರ್ಪಸಿದ್ದು, ಯಾವುದೇ ಶಾಂತಿಗೆ ಒಪ್ಪದೇ ಭಿನ್ನಾಭಿಪ್ರಾಯಗಳನ್ನೆ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಜಾತ್ರೆಯನ್ನು ನಿಷೇಧಿಸಿರುತ್ತಾರೆ.
ಸದರಿ ಗ್ರಾಮಗಳಲ್ಲಿ ಆ.21ರಿಂದ ಆ.25ರವರೆಗೆ ಜನರು ಗುಂಪುಗೂಡಿ ಮೆರವಣಿಗೆ ಮಾಡುವುದು, ಬಹಿರಂಗವಾಗಿ ಘೋಷಣೆ ಕೂಗುವುದು, ಪದ ಹಾಡುವುದು, ವಾದ್ಯಬಾರಿಸುವುದು, ವ್ಯಾಖ್ಯಾನ ಕೊಡುವುದು ಸೇರಿದಂತೆ ಯಾವುದೇ ಪ್ರದರ್ಶನಗಳನ್ನು ಮಾಡದಂತೆ ನಿಷೇದಿಸಿ ಜಿಲ್ಲಾಧಿಕಾರಿ ಅನಿರುದ್ಧ ಪಿ.ಶ್ರವಣ್ ಅವರು ಆದೇಶ ಹೊರಡಿಸಿದ್ದಾರೆ.