ದಾವಣಗೆರೆ ಫೆ.22 : ಸಮಾಜದಲ್ಲಿನ ಸಾಕಷ್ಟು ಪಿಡಗುಗಳನ್ನು ಬಗೆಹರಿಸಲು ಸಾಮಾಜಿಕ ನ್ಯಾಯ ದಿನವನ್ನು ಆಚರಿಸಲಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ದಾವಣಗೆರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್ ಅವರು ಹೇಳಿದರು.
ಮಂಗಳವಾರ ನಗರದ ಎ.ವಿ ಕಮಲಮ್ಮ ಮಹಿಳಾ ಕಾಲೇಜಿನ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ದಾವಣಗೆರೆ ಹಾಗೂ ಜಿಲ್ಲಾ ವಕೀಲರ ಸಂಘ ದಾವಣಗೆರೆ ಇವರ ಸಹಯೋಗದೊಂದಿಗೆ ಆಯೋಜಿಸಿದ ವಿಶ್ವ ಸಾಮಾಜಿಕ ನ್ಯಾಯ ದಿನ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸಕ್ತ ವರ್ಷದ ಧ್ಯೇಯವಾಕ್ಯ ‘ಔಪಚಾರಿಕ ಉದ್ಯೋಗದ ಮೂಲಕ ಸಾಮಾಜಿಕ ನ್ಯಾಯ ಸಾಧಿಸುವುದು’ ಎಂಬುದಾಗಿದೆ. ಬಡತನ ನಿರ್ಮೂಲನೆ, ಮೂಲಭೂತ ಹಕ್ಕುಗಳಿಂದ ವಂಚಿತರಾದ ವರ್ಗಗಳನ್ನು ರಕ್ಷಿಸುವುದು, ಲಿಂಗಭೇದವನ್ನು ತಡೆಗಟ್ಟುವುದು, ನಿರುದ್ಯೋಗ ಸಮಸ್ಯೆಗಳನ್ನು ಹೋಗಲಾಡಿಸುವುದು, ಮಾನವ ಹಕ್ಕುಗಳ ಉಲ್ಲಂಘನೆ ತಡೆಯುವುದು ಹೀಗೆ ಮೊದಲಾದ ಪಿಡುಗುಗಳನ್ನು ಹೋಗಲಾಡಿಸುವುದಕ್ಕೆ ಸಾಮಾಜಿಕ ನ್ಯಾಯ ದಿನದಿಂದ ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಮಾಜ ನಮಗೇನು ಕೊಡುತ್ತದೆ ಎಂಬುದಕ್ಕಿಂತ, ನಾವು ಸಮಾಜಕ್ಕೆ ಏನು ಕೊಡುತ್ತೇವೆ ಎಂಬುದು ಮುಖ್ಯವಾಗಿದೆ, ಕಾನೂನು ಸೇವಾ ಪ್ರಾಧಿಕಾರದಿಂದ ಹಲವಾರು ಕಾರ್ಯಕ್ರಮಗಳು ಲಭ್ಯವಿದ್ದು ಲೋಕ ಅದಾಲತ್ ಕಾರ್ಯಕ್ರಮ, ಸರ್ಕಾರದ ಸವಲತ್ತುಗಳನ್ನು ಜನರಿಗೆ ನೀಡುವುದು, ರಾಜಿ ಸಂಧನಾಗಳು, ಮಹಿಳಾ ಮತ್ತು ಮಕ್ಕಳ ಸಮಸ್ಯೆಗಳ ಪರಿಹಾರಕ್ಕಾಗಿ ಬಡವರ ಪರ ವಕೀಲರನ್ನು ಉಚಿತವಾಗಿ ನೇಮಿಸಿ ಕೊಡಲಾಗುತ್ತಿದ್ದು ಜನಸಾಮಾನ್ಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಸವರಾಜು ಡಿ.ಪಿ ಮಾತನಾಡಿ, ವಿಶ್ವ ಸಾಮಾಜಿಕ ನ್ಯಾಯ ದಿನವು ನಿರುದ್ಯೋಗ ನಿವಾರಣೆ ಮೂಲ ಉದ್ದೇಶ ಹೊಂದಿದೆ. ನಾವು ಯಾವುದೇ ಕೆಲಸ ಮಾಡಬೇಕು ಅಂದರೆ ಮಾನಸಿಕ ಸ್ಥಿತಿ ಸದೃಢವಾಗಿರಬೇಕು ಬದುಕು ಭದ್ರತೆ ಇದ್ದರೆ ಕೆಲಸಗಳು ಸಿಗುತ್ತದೆ, ಇದರಿಂದ ಸುಸ್ಥಿರ ಅಭಿವೃದ್ಧಿಯಾಗುತ್ತದೆ, ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗುತ್ತದೆ ಎಂದು ಹೇಳಿದರು.