ದಾವಣಗೆರೆ: ಇಂದು ದಾವಣಗೆರೆಯಲ್ಲಿ ದಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಮಾರ್ಚ್ 11, 12ರಂದು ಆಯೋಜಿಸಲಾಗಿರುವ ಅಖಿಲ ಭಾರತ ವಕೀಲರ ಒಕ್ಕೂಟದ (All India Bar Association) 9ನೇ ಕರ್ನಾಟಕ ರಾಜ್ಯ ಸಮ್ಮೇಳನದ(Karnataka State Conference) ಪೋಸ್ಟರ್ರನ್ನು ಬಿಡುಗಡೆ ಮಾಡಲಾಯಿತು.
ಹೌದು, ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ನ್ಯಾಯಾವಾದಿ ರಾಮಚಂದ್ರ ಕಲಾಲ್(Ramachandra Kalal) ಅವರು, ಸಂವಿಧಾನದ ಆಶಯಗಳನ್ನು ಅರ್ಥಪೂರ್ಣವಾಗಿ ಕಾರ್ಯರೂಪಕ್ಕೆ ತರುವ ಮೂಲಕ ಸ್ವತಂತ್ರ ನ್ಯಾಯಾಂಗ ಮತ್ತು ಪ್ರಜಾಪ್ರಭುತ್ವ ರಕ್ಷಣೆ ಮಾಡಲು ಸಾಧ್ಯ. ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ನಮ್ಮ ದೇಶವು ಬಹುತ್ವದ ಸಂಸ್ಕೃತಿ ಆಚಾರ ವಿಚಾರಗಳನ್ನು ಹೊಂದಿದ್ದು, ಸಂವಿಧಾನವು ಎಲ್ಲ ಜನರ ಸರ್ವತೋಮುಖ ಅಭಿವೃದ್ಧಿಯನ್ನು ಮತ್ತು ಹಕ್ಕುಗಳನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದು, ಉದಾತ್ತ ವಿಚಾರಗಳು ಯಾವುದೇ ಕಡೆಯಿಂದ ಬಂದರೂ ಮುಕ್ತ ಮನಸ್ಸಿನಿಂದ ನಾವು ಸ್ವಾಗತಿಸಬೇಕಿದೆ. ವಕೀಲರ ಹಿತರಕ್ಷಣೆಗಾಗಿ ಮತ್ತು ಸಂವಿಧಾನ ರಕ್ಷಣೆಗಾಗಿ ಅಖಿಲ ಭಾರತ ವಕೀಲರ ಒಕ್ಕೂಟದ 9ನೇ ಕರ್ನಾಟಕ ರಾಜ್ಯ ಸಮ್ಮೇಳನದ ಯಶಸ್ವಿಗೆ ನಾವು ಶ್ರಮಿಸಬೇಕು ಎಂದು ಹಿರಿಯ ನ್ಯಾಯಾವಾದಿ ರಾಮಚಂದ್ರ ಕಲಾಲ್ ಹೇಳಿದರು.
ಇನ್ನು, ಹಿರಿಯ ನ್ಯಾಯಾವಾದಿ ಎಲ್.ಹೆಚ್.ಅರುಣ್ಕುಮಾರ್ (L.H. Arunkumar) ಮಾತನಾಡಿ, ಸಂವಿಧಾನ ರಕ್ಷಿಸಿ, ಪ್ರಜಾಪ್ರಭುತ್ವ ಉಳಿಸಿ, ವಕೀಲರ ರಕ್ಷಣಾ ಕಾಯ್ದೆ ಜಾರಿಯಾಗಲಿ, ನ್ಯಾಯಾಂಗ ವ್ಯವಸ್ಥೆ ಅಸ್ಥಿರಗೊಳಿಸುವ ರಾಜಕೀಯ ಹುನ್ನಾರ ನಿಲ್ಲಲಿ ಎಂಬ ಘೋಷಣೆಗಳೋಂದಿಗೆ ವಕೀಲರ ಕರ್ನಾಟಕ ರಾಜ್ಯ ಸಮ್ಮೇಳನ ನಡೆಯುತ್ತಿದ್ದು, ದೇಶದ ವಿವಿದೆಡೆ ವಕೀಲರ ಮೇಲೆ ನಿರಂತವಾಗಿ ನಡೆಯುತ್ತಿರುವ ದೌರ್ಜನ್ಯ, ಕಿರುಕುಳ, ಹಲ್ಲೆ, ಕೊಲೆ ಕೃತ್ಯಗಳನ್ನು ತಡೆಗಟ್ಟಲು ಸರ್ಕಾರಗಳು ಶೀಘ್ರವಾಗಿ ವಕೀಲರ ರಕ್ಷಣಾ ಕಾಯ್ದೆ ರೂಪಿಸಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಕೀಲರಾದ ಉಷಾ ಕೈಲಾಸದ್, ಹೆಚ್.ಎಂ.ನಾಯ್ಕ, ನಾಗರಾಜ್ ಎನ್.ಬಿ, ಕೆ.ಹೆಚ್.ರುದ್ರೇಶ್, ಬಿ.ತಿರುಕಪ್ಪ, ಮಧು ಹೊರಹಟ್ಟಿ, ಗರ್ಶಾಮ್ ಮಾರ್ಕ್ ಇತರರು ಉಪಸ್ಥಿತರಿದ್ದರು.