ದಾವಣಗೆರೆ: ದಾವಣಗೆರೆ ಜಿಲ್ಲೆಯ ಹೊನ್ನಳ್ಳಿ ಕ್ಷೇತ್ರದ ಶಾಸಕರಾದ ಎಂ.ಪಿ ರೇಣುಕಾಚಾರ್ಯ ಅವರು, ನ್ಯಾಮತಿ ತಾಲೂಕು ಮಾಧನಭಾವಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಿರ್ಮಿಸಿರುವ 100 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಕೋವಿಡ್ ಸೋಂಕಿತರ ಕುಶಲೋಪರಿ ವಿಚಾರಿಸಿ, ಮಾಸ್ಕ್ ಗಳನ್ನು ನೀಡಿ ಆತ್ಮಸ್ಥೈರ್ಯ ತುಂಬಿದರು.
ನ್ಯಾಮತಿಯ ಪವಿತ್ರ ಶ್ರೀ ಕ್ಷೇತ್ರ ಸೇವಾಲಾಲ್ ಗೆ ಭೇಟಿ ನೀಡಿದ ಎಂ.ಪಿ ರೇಣುಕಾಚಾರ್ಯ ಅವರು, ಪವಿತ್ರ ಶ್ರೀ ಕ್ಷೇತ್ರ ಸೇವಾಲಾಲ್ ರೈಲು ಮಾರ್ಗ ಕಲ್ಪಿಸುವ ಭರವಸೆ ನೀಡಿದ್ದೆ, ಈಗದು ಕಾರ್ಯರೂಪಕ್ಕೆ ಬಂದಿದ್ದು, ಶಿವಮೊಗ್ಗ- ಸೂರಗೊಂಡನಕೊಪ್ಪ- ಶಿಕಾರಿಪುರಕ್ಕೆ ರೈಲು ಮಾರ್ಗ ಕಲ್ಪಿಸುವುದು ಬಿ.ಎಸ್ ಯಡಿಯೂರಪ್ಪ ಅವರ ಕನಸು ಎಂದು ಹೇಳಿದರು.
ರೈತರ ಭೂಸ್ವಾದೀನ ಬಗ್ಗೆ ಸಾಕಷ್ಟು ತೊಂದರೆಯಾಗಿದ್ದು ರೈತರಿಗೆ ಮಾಹಿತಿ ನೀಡದೆ ನೋಟಿಸ್ ನೀಡಿದ್ದು ಗೊಂದಲ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಇಂದು ರೈತರೊಂದಿಗೆ ಅಧಿಕಾರಿಗಳ ಸಭೆ ಮಾಡಿ ರೈತರ ಸಮಸ್ಯೆ ಆಲಿಸಿ, ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಸಭೆ ಮಾಡಿ ರೈತರಿಗೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.