ಹೊಸಪೇಟೆ (ವಿಜಯನಗರ): ಕ್ಷುಲ್ಲಕ ಕಾರಣಕ್ಕಾಗಿ ಕುರುಬರು ಹಾಗೂ ಮಾದಿಗ ಸಮಾಜದ ಯುವಕರ ನಡುವೆ ಜಗಳ ನಡೆದಿದ್ದು, ಎರಡೂ ಕಡೆಯ ಗುಂಪಿನವರು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ಆಸ್ತಿ ಹಾನಿಗೊಳಿಸಿರುವ ಘಟನೆ ಹೊಸಪೇಟೆ ತಾಲ್ಲೂಕಿನ ಹಳೆ ಮಲಪನಗುಡಿಯಲ್ಲಿ ನಡೆದಿದೆ.
ಹೌದು, ಗುರುವಾರ ಈ ಘಟನೆ ನಡೆದಿದ್ದು, ಕುರುಬರು ಹಾಗೂ ಮಾದಿಗ ಎರಡು ಸಮುದಾಯದವರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಮನೆಯ ಕಿಟಕಿ ಗಾಜುಗಳು ಪುಡಿಪುಡಿಯಾಗಿದ್ದು, ಮನೆ ಎದುರು ನಿಲ್ಲಿಸಿದ್ದ ದ್ವಿಚಕ್ರ ವಾಹನ ಸೇರಿದಂತೆ ಇತರೆ ವಸ್ತುಗಳಿಗೂ ಹಾನಿಯಾಗಿದೆ.
ಹೋಳಿ ಹಬ್ಬದಲ್ಲಿ ಕುರುಬರು ಹಾಗೂ ಮಾದಿಗ ಸಮಾಜದ ಯುವಕರ ನಡುವೆ ಜಗಳ:
ಇನ್ನು, ಬುಧವಾರ ಹೋಳಿ ಹಬ್ಬದ ಸಂದರ್ಭದಲ್ಲಿ ಕುರುಬ ಹಾಗೂ ಮಾದಿಗ ಎರಡು ಸಮಾಜದ ಇಬ್ಬರು ಯುವಕರ ನಡುವೆ ಸಣ್ಣ ಜಗಳವಾಗಿದ್ದು, ಗುರುವಾರ ಎರಡು ಕಡೆಯವರು ಪುನಃ ಜಗಳವಾಡಿದ್ದು, ಜಗಳ ತಾರಕಕ್ಕೇರಿದ್ದು, ಪರಿಣಾಮ ಕೆಲ ಮನೆಗಳ ಮೇಲೆ ಕಲ್ಲು ಎಸೆದು ಹಾನಿ ಉಂಟು ಮಾಡಿದ್ದಾರೆ.
ಸದ್ಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ. ಇನ್ನು, ಘಟನೆಗೆ ಕಾರಣರಾದವರ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್. ಅವರು ತಿಳಿಸಿದ್ದಾರೆ.