ಭಟ್ಕಳ: ಇತ್ತೀಚೆಗಷ್ಟೇ ಗೋಕಳ್ಳತನ ನಡೆಸಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ಭಟ್ಕಳದಲ್ಲಿ ಗೋಕಳ್ಳರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ತಾಲ್ಲೂಕಿನ ಬೆಳಲಖಂಡ ಭಾಗದ ಮಂಜುನಾಥ ಸೋಮಯ್ಯ ಗೊಂಡ ಎಂಬುವವರಿಗೆ ಸೇರಿದ್ದ ಎಮ್ಮೆಯನ್ನು ಹತ್ಯೆ ಮಾಡಿ ಅದರ ಅವಶೇಷಗಳನ್ನು ಅಲ್ಲಿಯೇ ಇದ್ದ ಬಾವಿಯೊಂದರಲ್ಲಿ ಎಸೆದು ಹೋಗಿದ್ದಾರೆ.
ಬೆಳಲಖಂಡ ಭಾಗದ ಜನವಸತಿ ಪ್ರದೇಶದ ಸಮೀಪದಲ್ಲೇ ಎಮ್ಮೆಯನ್ನು ಹತ್ಯೆಗೈದಿರುವ ಗೋಹಂತಕರು ಮಾಂಸವನ್ನು ಅಲ್ಲಿಯೇ ಬೇರ್ಪಡಿಸಿಕೊಂಡಿದ್ದಾರೆ. ಬಳಿಕ ಎಮ್ಮೆಯ ತಲೆ, ಚರ್ಮ, ಹೊಟ್ಟೆಯ ಅವಶೇಷಗಳನ್ನು ಚೀಲದಲ್ಲಿ ಹಾಕಿ ಅಲ್ಲಿಯೇ ಇದ್ದ ಪಾಳು ಬಾವಿಯೊಂದಕ್ಕೆ ಎಸೆದು ಪರಾರಿಯಾಗಿದ್ದಾರೆ.
ಮಾಲೀಕ ಮಂಜುನಾಥ ಎಮ್ಮೆ ಮನೆಗೆ ಬರದಿದ್ದನ್ನು ಕಂಡು ಅಕ್ಕಪಕ್ಕದ ಸ್ಥಳದಲ್ಲಿ ಹುಡುಕಾಟ ನಡೆಸಿದ್ದು ಈ ವೇಳೆ ಬಾವಿಯ ಬಳಿ ಎಮ್ಮೆಯ ಕಳೇಬರ ಪತ್ತೆಯಾಗಿದೆ. ಈ ಎಮ್ಮೆ ಕಳೆದ ಮೂರು ತಿಂಗಳ ಹಿಂದಷ್ಟೇ ಕರುವೊಂದಕ್ಕೆ ಜನ್ಮನೀಡಿದ್ದು ಗೋಹಂತಕರ ಕೃತ್ಯದಿಂದ ಕರುವೊಂದು ತಾಯಿಯನ್ನು ಕಳೆದುಕೊಂಡಂತಾಗಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಮ್ಮೆ ಹತ್ಯೆಯಿಂದಾಗಿ ಕುಟುಂಬಸ್ಥರು ಬೇಸರಗೊಂಡಿದ್ದು ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸುವಂತೆ ಆಗ್ರಹಿಸಿದ್ದಾರೆ.
ಕಳೆದ 10 ದಿನಗಳ ಹಿಂದೆ ಭಟ್ಕಳದ ಆಸರಕೇರಿ ಭಾಗದಲ್ಲೂ ಇದೇ ರೀತಿ ಗೋವನ್ನು ಕಳ್ಳತನ ಮಾಡಿ, ಅಲ್ಲಿಯೇ ಕೊಂದು ಚರ್ಮ, ತಲೆ ಹಾಗೂ ಇನ್ನಿತರೆ ಭಾಗಗಳನ್ನು ಬಿಸಾಡಿ ಹೋಗಿದ್ದರು. ಇದೀಗ ಮತ್ತೆ ಅಂತಹುದೇ ಘಟನೆ ಮರುಕಳಿಸಿದ್ದು ಹಿಂದೂ ಸಂಘಟನೆಗಳು, ಸಾರ್ವಜನಿಕರು ಗೋಹಂತಕರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.