ಹರಪನಹಳ್ಳಿ: ಕುರುಬ ಸಮಾಜಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿ ಬೇಕೆಂದು ಹೋರಾಟ ಮಾಡುತ್ತಿರುವ ಕಾಗಿನೆಲೆ ಪೀಠಾಧ್ಯಕ್ಷರಾದ ಶ್ರೀ ನಿರಂಜನಾನಂದಪುರಿ ಶ್ರೀಗಳ ಕರೆಯ ಮೇರೆಗೆ ನಾಳೆ ಫೆ.7 ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಕುರುಬ ಸಮುದಾಯದ ಬೃಹತ್ ಜಾಗೃತಿ ಸಮಾವೇಶಕ್ಕೆ ಹರಪನಹಳ್ಳಿ ತಾಲ್ಲೂಕಿನ ಕುರುಬ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಾಲೂಕಿನ ಕುರುಬ ಸಮುದಾಯದ ಮುಖಂಡರಾದ ಕಲ್ಲೇರ ಬಸವರಾಜ ಅವರು ಮನವಿ ಮಾಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಮುಖಂಡರಾದ ಕಲ್ಲೇರ ಬಸವರಾಜ ಅವರು, ಶ್ರೀಗಳು ಈಗಾಗಲೇ ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಮೂಲಕ ತಲುಪಿದ್ದು ಕುರುಬ ಸಮಾಜದ ಎಲ್ಲಾ ಶಾಖಾಮಠದ ಶ್ರೀಗಳು ಸೇರಿದಂತೆ ಸಮುದಾಯದ ರಾಜಕೀಯ ಮುಖಂಡರು ಸಮಾವೇಶದಲ್ಲಿ ಭಾಗವಹಿಸಲಿದ್ದು, ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಹೆಚ್.ಬಿ.ಪರಶುರಾಮಪ್ಪ ಅವರು ಮಾತನಾಡಿ, ತಾಲ್ಲೂಕಿನಿಂದ ಸುಮಾರು 10 ರಿಂದ 15 ಸಾವಿರ ಕುರುಬ ಸಮಾಜದ ಬಂಧುಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ತಾಲ್ಲೂಕಿನ 30 ಗ್ರಾಮ ಪಂಚಾಯ್ತಿ ಕೇಂದ್ರಗಳಿಂದ ಸಮಾಜದ ಬಂಧುಗಳು ಸಮಾವೇಶಕ್ಕೆ ತೆರಳುವುದಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ಬೈಕ್, ಕಾರ್ ಹಾಗೂ ಟ್ರಾಕ್ಟರ್ ಗಳ ಮೂಲಕವೂ ಬಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನ ಸಮಾವೇಶದಲ್ಲಿ ತೆರಳುವ ಸಾಧ್ಯತೆಯಿದ್ದು ಸುಮಾರು 10 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದವರು ಸೇರಲಿದ್ದಾರೆ ಎಂದು ಹೇಳಿದರು.
ಕುರುಬರ ಐತಿಹಾಸಿಕ ಎಸ್ ಟಿ ಹೋರಾಟದ ಸಮಾರೋಪ ಸಮಾರಂಭದ ಬೃಹತ್ ಸಮಾವೇಶದ ಸ್ಥಳ
ಇನ್ನು ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷರಾದ ವೈ.ಕೆ.ಬಿ.ದುರುಗಪ್ಪ ಅವರು ಮಾತನಾಡಿ, ಇಂದು ರಾತ್ರಿಯಿಂದ ಪಟ್ಟಣದ ಸಂಡೂರು ಕೇರಿ, ಕಂಚಿಕೇರಿ ಹಾಗೂ ಕೋಣನಕೇರಿಯಿಂದ ಮೂರು ಬಸ್ಗಳು ತೆರಳಲಿದ್ದು, ಎಲ್ಲ ಗ್ರಾಮಗಳಿಂದಲೂ ಇದೇ ಸಮಯಕ್ಕೆ ಬಸ್ ಗಳು ತೆರಳಲಿವೆ. ಪ್ರತಿ ಬಸ್ಗಳಲ್ಲಿ ಪ್ರಯಾಣಿಸುವ ಸಮಾಜದ ಬಂಧುಗಳಿಗೆ ಊಟ ತಿಂಡಿಯ ವ್ಯವಸ್ಥೆ ಕೂಡ ಮಾಡಲಾಗಿದ್ದು, ಸಮಾವೇಶಕ್ಕೆ ಕಳೆಕಟ್ಟಲು ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅಧ್ಯಕ್ಷರಾದ ವೈ.ಕೆ.ಬಿ.ದುರುಗಪ್ಪ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕುರಬ ಸಮಾಜದ ಎಸ್ಟಿ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಹೆಚ್.ವಸಂತ, ಪುರಸಭೆ ಸದಸ್ಯರಾದ ಗಣೇಶ್ ಪೈಲ್ವನ್, ಭರತೇಶ್, ಬಿಎಲ್ಡಿ ಬ್ಯಾಂಕ ಅಧ್ಯಕ್ಷ ಸಾಬಳ್ಳಿ ಜಂಬಣ್ಣ, ಮುಖಂಡರಾದ ಅಲಮರಿಸಿಕೇರಿ ಶೇಖರಪ್ಪ,ಮಾಲಾ. ಶ್ರೀನಿವಾಸ , ಗೋಣಿಬಸಪ್ಪ, ಹಾಗೂ ಇತರರು ಉಪಸ್ಥಿತರಿದ್ದರು.