ಬೆಂಗಳೂರು: ಎಪಿಎಂಸಿ ಕಾಯ್ದೆ, ಭೂಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತಪರ ಸಂಘಟನೆಗಳು ಕರ್ನಾಟಕ ಬಂದ್ ಸೂಚಿಸಿ ಹೋರಾಟ ಮಾಡುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಿ ಎಂ ಯಡಿಯೂರಪ್ಪ ಅವರು ರೈತ ಸಂಘಟನೆಗಳಿಗೆ ವಿನಂತಿ ಮಾಡಿಕೊಂಡಿದ್ದು, “ಎಪಿಎಂಸಿ ಕಾಯ್ದೆ, ಭೂಸುಧಾರಣೆ ಕಾಯ್ದೆ ತಿದ್ದುಪಡಿಗಳಿಂದ ರೈತರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ನಾನು ರೈತರ ಮಗನಾಗಿ, ರೈತರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದೇನೆ. ಅನ್ನ ಕೊಡುವ ಅನ್ನದಾತನಿಗೆ ಕಿಂಚಿತ್ತೂ ತೊಂದರೆಯಾಗದಂತೆ, ನಾಡಿನ ಅನ್ನದಾತರ ಉತ್ತಮ ಭವಿಷ್ಯಕ್ಕಾಗಿ ಸಾಕಷ್ಟು ಚರ್ಚೆಮಾಡಿ ತಿದ್ದುಪಡಿ ತರಲಾಗಿದೆ.
ಎಪಿಎಂಸಿ ತಿದ್ದುಪಡಿಯಿಂದ ರೈತರು ತಮ್ಮ ಬೆಳೆಯನ್ನು ಒಳ್ಳೆಯ ದರ ಸಿಗುವ ಕಡೆ, ಎಪಿಎಂಸಿಯಲ್ಲಾಗಲಿ ಅಥವಾ ದೇಶದ ಯಾವುದೇ ಭಾಗದಲ್ಲಿ ಮಾರಬಹುದು. ಹಿಂದೆ ಹೊರಗೆ ಮಾರಾಟ ಮಾಡಿದರೆ ದಂಡ ವಿಧಿಸಲಾಗುತ್ತಿತ್ತು. ಈ ಬಂಧನದಿಂದ ರೈತರನ್ನು ಮುಕ್ತಗೊಳಿಸಲಾಗಿದೆ. ಎಪಿಎಂಸಿ ಬಾಗಿಲು ಮುಚ್ಚಲ್ಲ. ರೈತರ ಬಾಂಧವರಿಗೆ ತಪ್ಪುಮಾಹಿತಿ ನೀಡಲಾಗುತ್ತಿದೆ.
ಭೂಸುಧಾರಣೆ ಕಾಯ್ದೆಯಡಿ ನೀರಾವರಿ ಭೂಮಿ ಖರೀದಿಗೆ ಅವಕಾಶ ನೀಡಿಲ್ಲ. ಒಂದು ಕುಟುಂಬ 54 ಎಕರೆ ಭೂಮಿ ಮಾತ್ರ ಖರೀದಿಸಬಹುದು. 22 ಲಕ್ಷ ಭೂಮಿ ಸಾಗುವಳಿಯಾಗದೆ ಬಂಜರಾಗಿದೆ. ಈ ತಿದ್ದುಪಡಿಯಿಂದ ಯಾರು ಬೇಕಾದರೂ ಕೃಷಿ ಮಾಡಬಹುದು. ಹಾಗೆಯೇ, ಕೈಗಾರಿಕೆಯೂ ಅಗತ್ಯವಿದೆ. ಕೃಷಿ ಇಲ್ಲದ ಭೂಮಿಯಲ್ಲಿ ಕೈಗಾರಿಕೆ ಮಾಡಿದರೆ ಉದ್ಯೋಗ ಸೃಷ್ಟಿಯಾಗುತ್ತದೆ.
ನೀರಾವರಿ ಜಮೀನು ನೀರಾವರಿಗೇ ಮೀಸಲು. ಪರಿಶಿಷ್ಟ ಜಾತಿ, ವರ್ಗಗಳ ಭೂಮಿ ಖರೀದಿ ಅವಕಾಶ ಇಲ್ಲ. ಸಣ್ಣ, ಅತಿಸಣ್ಣ ರೈತರಿಗೆ ಬಾಧಕವಾಗದಂತೆ ಎಚ್ಚರವಹಿಸಿದ್ದೇವೆ. ಬರಡು ಭೂಮಿಯಲ್ಲಿ ಕೈಗಾರಿಕೆೆ ಮಾಡಲು ಅಡ್ಡಿಯಿಲ್ಲ. ರೈತ ಸಂಘಟನೆಗಳಿಗೆ ಕಳಕಳಿಯ ಮನವಿ – ಅನವಶ್ಯಕವಾಗಿ ರೈತರನ್ನು ಗೊಂದಲಕ್ಕೆ ದೂಡಬೇಡಿ. ನನ್ನ ಬಳಿ ಬಂದು ಚರ್ಚೆ ಮಾಡಿ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಎಪಿಎಂಸಿ ಕಾಯ್ದೆ, ಭೂಸುಧಾರಣೆ ಕಾಯ್ದೆ ತಿದ್ದುಪಡಿಗಳಿಂದ ರೈತರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ನಾನು ರೈತರ ಮಗನಾಗಿ, ರೈತರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದೇನೆ. ಅನ್ನ ಕೊಡುವ ಅನ್ನದಾತನಿಗೆ ಕಿಂಚಿತ್ತೂ ತೊಂದರೆಯಾಗದಂತೆ, ನಾಡಿನ ಅನ್ನದಾತರ ಉತ್ತಮ ಭವಿಷ್ಯಕ್ಕಾಗಿ ಸಾಕಷ್ಟು ಚರ್ಚೆಮಾಡಿ ತಿದ್ದುಪಡಿ ತರಲಾಗಿದೆ. (1/4) pic.twitter.com/AWrbn2Oopu
— B.S. Yediyurappa (@BSYBJP) September 28, 2020