ಬೆಂಗಳೂರು: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಮೊಮ್ಮಗಳು ಸೌಂದರ್ಯ, ಇಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ವಸಂತ ನಗರದ ನಿವಾಸದಲ್ಲಿ ಸೌಂದರ್ಯ ಸಾವಿಗೆ ಶರಣಾಗಿದ್ದು, ಅವರ ಮೃತದೇಹವನ್ನು ಅಬ್ಬಿಗೆರೆಗೆಯ ಪತಿಯ ಮನೆಗೆ ತೆಗೆದುಕೊಂಡು ಹೋಗಲಾಗಿದ್ದು, ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ದೊರೆತಿದೆ.
ಮಾಜಿ ಸಿಎಂ ಬಿಎಸ್ ವೈ ಪುತ್ರಿ ಪದ್ಮಾವತಿ ಅವರ ಮಗಳಾದ ಸೌಂದರ್ಯ ಬೆಂಗಳೂರಿನ ಪ್ರತಿಷ್ಠಿತ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ವೈದ್ಯ ಡಾ.ನೀರಜ್ ಜೊತೆ 3 ವರ್ಷದ ಹಿಂದೆ ಸಪ್ತಪದಿ ತುಳಿದಿದ್ದ ಸೌಂದರ್ಯ, ತುಂಬಾ ಅನ್ಯೋನ್ಯವಾಗಿದ್ದರು. ಗಂಡ – ಹೆಂಡತಿ ನಡುವೆ ಯಾವುದೇ ವೈಮನಸ್ಸು ಇರಲಿಲ್ಲ ಎಂದು ಹೇಳಲಾಗುತ್ತಿದ್ದು, ಸೌಂದರ್ಯ ಅವರ ತವರು ಮತ್ತು ಪತಿ ಮನೆಯ ಕಡೆಯೂ ಚೆನ್ನಾಗಿದ್ದು,ಆರ್ಥಿಕವಾಗಿಯೂ ಯಾವುದೇ ಸಮಸ್ಯೆ ಇರಲಿಲ್ಲ ಎಂಬ ಮಾಹಿತಿ ದೊರೆತಿದೆ.
ಹೀಗಿದ್ದರೂ, ಕೂಡ ಸೌಂದರ್ಯ ಯಾಕೆ ಹಠಾತ್ ಸಾವಿಗೆ ಶರಣಾದರು ಎಂದು ಮಾತ್ರ ರಹಸ್ಯವಾಗಿಯೇ ಉಳಿದಿದೆ. ಕೆಲವರ ಪ್ರಕಾರ, ಸೌಂದರ್ಯ ಖಿನ್ನತೆಗೆ ಒಳಗಾಗಿದ್ದು, ಇದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಸ್ಪಷ್ಟತೆ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.