ನಿಮ್ಮ ಬಳಿ ಹಳೆಯ ಸ್ಕೂಟರ್ ಇದೆಯೇ? ಅಥವಾ ಹಳೆಯ ಬೈಕು ಇದೆಯೇ? ಇವೆರಡೂ ಇಲ್ಲದಿದ್ದರೆ ಹಳೆಯ ಕಾರು ಇದೆಯೇ? ಆಗಿದ್ದರೆ ನೀವು ಖಚಿತವಾಗಿ ಒಂದು ವಿಷಯವನ್ನು ತಿಳಿದುಕೊಳ್ಳಲೇಬೇಕು. ಹೌದು ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತರಲಿದೆ ಎನ್ನಲಾಗಿದ್ದು ಇದರಿಂದ ಹಳೆಯ ವಾಹನಗಳನ್ನು ಹೊಂದಿರುವವರ ಮೇಲೆ ಪರಿಣಾಮ ಬೀರುತ್ತದೆ.
ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಮಾತನಾಡಿ, ತಮ್ಮ ಸಚಿವಾಲಯವು ಸ್ಕ್ರಾಪೇಜ್ ನೀತಿ ಕುರಿತು ಕೇಂದ್ರಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸಿದೆ ಎಂದು ಹೇಳಿದ್ದು, ಮೋದಿ ಸರ್ಕಾರ ಕೂಡ ಈ ಪ್ರಸ್ತಾಪಗಳನ್ನು ಶೀಘ್ರದಲ್ಲೇ ಅಂಗೀಕರಿಸುವುದಾಗಿ ಹೇಳಿದೆ.
ಸ್ಕ್ರ್ಯಾಪೇಜ್ ಪಾಲಿಸಿ ಪ್ರಸ್ತಾಪಗಳ ಪ್ರಕಾರ, 15 ವರ್ಷಕ್ಕಿಂತ ಹಳೆಯದಾದ ವಾಣಿಜ್ಯ ಮತ್ತು ಖಾಸಗಿ ವಾಹನಗಳನ್ನು ಇನ್ನು ಮುಂದೆ ಬಳಸಲಾಗುವುದಿಲ್ಲ. ಇದರರ್ಥ ಅವುಗಳನ್ನು ಗುಜರಿ ಸಾಮಾನಿಗೆ ( ಸ್ಕ್ರ್ಯಾಪ್) ಹಾಕಬೇಕು. ಹೊಸ ವಾಹನಗಳ ಬೇಡಿಕೆಯನ್ನು ಹೆಚ್ಚಿಸುವ ಮತ್ತು ಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರವು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ತೋರುತ್ತದೆ.
ಕೇಂದ್ರ ಬಜೆಟ್ 2021 ರ ಮಂಡನೆಗೂ ಮುಂಚಿತವಾಗಿ ನಿತಿನ್ ಗಡ್ಕರಿ ಈ ರೀತಿಯ ಹೇಳಿಕೆ ನೀಡಿರುವುದು ಗಮನಾರ್ಹ. ಸ್ಕ್ರಾಪೇಜ್ ನೀತಿ ಜಾರಿಗೆ ಬಂದರೆ ವಾಹನ ಉದ್ಯಮದಲ್ಲಿ ಬೇಡಿಕೆ ಹೆಚ್ಚಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಸ್ಕ್ರಾಪೇಜ್ ನೀತಿಯ ಬಗ್ಗೆ ಪಿಎಂಒ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ.
ಈ ಸ್ಕ್ರಾಪೇಜ್ ನೀತಿಯನ್ನು ಅಂಗೀಕರಿಸಿ ಜಾರಿಗೊಳಿಸಿದರೆ ಭಾರತವು ಆಟೋಮೊಬೈಲ್ ಹಬ್ ಆಗಲಿದೆ ಎಂದು ನಿತಿನ್ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸ್ಕ್ರಾಪೇಜ್ ವಾಹನಗಳ ಭಾಗಗಳನ್ನು ಹೊಸದರಲ್ಲಿ ಬಳಸಬಹುದು ಎಂದು ಅವರು ಹೇಳಿದ್ದು, ಇದರಿಂದ ಹೊಸ ವಾಹನಗಳ ಬೆಲೆಯೂ ತಗ್ಗುತ್ತದೆ ಎಂದು ಹೇಳಿದ್ದಾರೆ.