ಬಾಸೆಟೆರೆ: ಸೂರ್ಯಕುಮಾರ್ ಯಾದವ್ ಅಬ್ಬರದ ಬ್ಯಾಟಿಂಗ್ ಸಹಾಯದಿಂದ ಮೂರನೇ T20 ಪಂದ್ಯದಲ್ಲಿ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ 7 ವಿಕೆಟ್ಗಳಿಂದ ಗೆದ್ದು ಬೀಗಿದೆ. ಇದರೊಂದಿಗೆ 2-1 ಅಂತರದಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ತಂಡವು 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ತಂಡದ ಪರ ಕೈಲ್ ಮೇಯರ್ಸ್ 50 ಎಸೆತಗಳಲ್ಲಿ 73 ರನ್ ಗಳಿಸುವುದರೊಂದಿಗೆ ತಂಡದ ಸ್ಕೋರ್ ಹೆಚ್ಚಿಸಿದರು. ಬ್ರಾಂಡನ್ ಕಿಂಗ್ 20, ಪೂರನ್ 22, ರೋವ್ಮನ್ ಪೊವೆಲ್ 23, ಹಾಗೂ ಹೆಟ್ಮೆಯರ್ 20 ರನ್ ಬಾರಿಸಿದರು. ಭಾರತದ ಪರ ಭುವನೇಶ್ವರ್ 2 ವಿಕೆಟ್ ಪಡೆದು ಮಿಂಚಿದರು.
ಬಳಿಕ ವೆಸ್ಟ್ ಇಂಡೀಸ್ ನೀಡಿದ 165 ರನ್ಗಳ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 165 ರನ್ನ ಚಚ್ಚಿ ಗೆಲುವು ದಾಖಲಿಸಿತು. ಭಾರತದ ಸೂರ್ಯಕುಮಾರ್ ಯಾದವ್ 76 ರನ್ (44 ಎಸೆತ, 8 ಬೌಂಡರಿ, 4 ಸಿಕ್ಸರ್), ರಿಷಭ್ ಪಂತ್ ಅಜೇಯ 33 ರನ್ ಹಾಗೂ ಶ್ರೇಯಸ್ ಅಯ್ಯರ್ 24 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಇಂಡೀಸ್ ಪರ ಬೌಲಿಂಗ್ ಮಾಡಿದ ಡೊಮಿನಿಕ್ ಡ್ರೇಕ್ಸ್, ಅಕೇಲ್ ಹೊಸೈನ್, ಜೇಸನ್ ಹೋಲ್ಡರ್ ತಲಾ 1 ವಿಕೆಟ್ ಪಡೆದರು.
ಇನ್ನು, ಅದ್ಬುತ ಬ್ಯಾಟಿಂಗ್ ಪ್ರದರ್ಶಿಸಿ ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಸೂರ್ಯ ಕುಮಾರ ಯಾದವ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.