ಶ್ರಾವಣ ಮಾಸದ ಕೊನೆ ವಾರ ರಾಜ್ಯದಿಂದ ಕಾಶಿಯಾತ್ರೆಗೆ ‘ಭಾರತ್ ಗೌರವ್’ ವಿಶೇಷ ರೈಲು ಹೊರಡಲಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, ಈ ಸೇವೆಗೆ ರೈಲ್ವೆ ಇಲಾಖೆ ಅನುಮತಿ ಲಭಿಸಿದೆ. ರೈಲನ್ನು ಬಾಡಿಗೆಗೆ ಪಡೆದು ಕಾಶಿಗೆ ಓಡಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ಕಡಿಮೆ ಖರ್ಚಿನಲ್ಲಿ ಪುಣ್ಯ ಕ್ಷೇತ್ರ ಪ್ರವಾಸಕ್ಕೆ ಪ್ಯಾಕೇಜ್ ರೂಪಿಸಲಾಗಿದೆ. ರಿಯಾಯಿತಿ ದರದ 7 ದಿನದ ಯಾತ್ರೆಯಿದು. 1 ಕೋಟಿ ರೂ. ಬ್ಯಾಂಕ್ ಗ್ಯಾರಂಟಿ ನೀಡಿ ಟ್ರೈನ್ ಪಡೆಯಲಾಗಿದೆ ಎಂದರು.
10 ಸಾವಿರಕ್ಕೆ 7 ದಿನದ ಕಾಶಿಯಾತ್ರೆ:
‘ಭಾರತ್ ಗೌರವ್’ ರೈಲು ಬೆಂಗಳೂರಿನಿಂದ ಹೊರಟು ವಾರಣಾಸಿ-ಅಯೋಧ್ಯೆ-ಪ್ರಯಾಗರಾಜ್ ಮಾರ್ಗದಲ್ಲಿ ಒಟ್ಟು 4161 ಕಿ.ಮೀ. ಸಂಚರಿಸಲಿದೆ.
ಈ ರೈಲಿನಲ್ಲಿ 14 ಬೋಗಿಯಿದ್ದು, 11 ಬೋಗಿಯನ್ನು ಯಾತ್ರಿಗಳ ಪ್ರವಾಸಕ್ಕೆ ಅಣಿಗೊಳಿಸಲಾಗುವುದು. 3 ಟಯರ್ AC ವ್ಯವಸ್ಥೆಯಿದೆ. ಒಂದು ಬೋಗಿಯನ್ನು ದೇವಸ್ಥಾನವಾಗಿ ಪರಿವರ್ತಿಸಿ ಭಜನೆಗೆ ಅವಕಾಶ ನೀಡಲಾಗುವುದು. ಬೋಗಿಗಳ ಮೇಲೆ 11 ದೇಗುಲಗಳ ಮಾಹಿತಿ ಅಳವಡಿಸಲಾಗುತ್ತದೆ.
ಇನ್ನು, 7 ದಿನದ ಕಾಶಿ ಪ್ರವಾಸಕ್ಕೆ ಅಂದಾಜು 15,೦೦೦ ವೆಚ್ಚವಾಗಲಿದ್ದು, 5,೦೦೦ ರೂ. ಸರ್ಕಾರದ ಸಹಾಯಧನವಿದೆ.