ಕಲಬುರಗಿ: ಕರ್ನಾಟಕದಲ್ಲಿ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದ್ದು, ಇದನ್ನು ತಪ್ಪಿಸಲು ಸರ್ಕಾರ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು. ಆದರೆ ದೂರದೃಷ್ಟಿ ಇಲ್ಲದ ಸರ್ಕಾರದಿಂದ ಜನರು ಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಕಲಬುರಗಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, 2019, 2020ರಲ್ಲಿ ಪ್ರವಾಹ ಬಂದಾಗ ಆದ ನಷ್ಟದ ಪರಿಹಾರ ಇಲ್ಲಿ ತನಕ ಕೊಟ್ಟಿಲ್ಲ. ಶೀಘ್ರದಲ್ಲಿ ಪರಿಹಾರವನ್ನು ಜನರಿಗೆ ತಲುಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
‘ನನ್ನ ಹುಟ್ಟುಹಬ್ಬದ ಆಚರಣೆಯಿಂದ ಬಿಜೆಪಿಗರಿಗೆ ಭಯ’
ಇನ್ನು, ನಾನು ಹುಟ್ಟುಹಬ್ಬ ಮಾಡಿಕೊಳ್ಳುತ್ತಿರುವುದರಿಂದ ಬಿಜೆಪಿಯವರಿಗೆ ಭಯ ಶುರುವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಸಹ 75ನೇ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲವಾ?’ ಎಂದು ಪ್ರಶ್ನಿಸಿರುವ ಸಿದ್ದು, ‘ನನ್ನ ಹುಟ್ಟುಹಬ್ಬವನ್ನು ನಮ್ಮ ಬೆಂಬಲಿಗರು ಮಾಡುತ್ತಿದ್ದಾರೆ’ ಎಂದಿದ್ದಾರೆ. ‘ಇದು ಸಿದ್ದರಾಮೋತ್ಸವ ಅಲ್ಲ, ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬ ಅಷ್ಟೇ. ಸಿದ್ದರಾಮೋತ್ಸವ ಅಂತ ಕರೆದಿದ್ದೆ ನೀವು ಎಂದು ಹೇಳಿದ್ದಾರೆ.