ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಿನ ಚುನಾವಣೆಗೆ ಕೋಲಾರದಿಂದ ಸ್ಪರ್ಧಿಸಲು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದ್ದು, ಕುರುಬನ ವಿರುದ್ಧವೇ ತೊಡೆ ತಟ್ಟಲು ಸಿದ್ದರಾಗಿದ್ದಾರೆ ಎನ್ನಲಾಗಿದೆ.
ಹೌದು, ಕಳೆದ ಮಂಗಳವಾರ ಮಾಜಿ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ನೇತೃತ್ವದ ಜಿಲ್ಲಾ ಕೈ ನಾಯಕರ ತಂಡ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ,ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತಗಳೇ ಗೆಲುವಿಗೆ ನಿರ್ಣಾಯಕ. ನೀವು ಅಹಿಂದ ತತ್ವ ಹೊಂದಿರುವವರು. ಹಾಲಿ ಶಾಸಕ ಶ್ರೀನಿವಾಸ್ ಗೌಡ ಕೂಡ ಕ್ಷೇತ್ರ ಬಿಟ್ಟುಕೊಡುತ್ತಾರೆ ಎಂದು ಮನವೊಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಈ ನಿರ್ಧಾರದಿಂದ ಕುರುಬ ನಾಯಕನಿಗೇ ಹಿನ್ನಡೆ ಎನ್ನಲಾಗುತ್ತಿದೆ. ಹೌದು, ಸಿದ್ದರಾಮಯ್ಯ ಅವರಂತೆ ಮಾಜಿ ಶಾಸಕ ವರ್ತೂರು ಪ್ರಕಾಶ್ ಕೂಡ ಕುರುಬ ಸಮುದಾಯದವರೇ. ಈ ಹಿಂದೆ ಪಕ್ಷೇತರರಾಗಿ 2 ಬಾರಿ ಗೆದ್ದು, ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿ ವಿರುದ್ಧ ಕೆಲವೇ ಮತಗಳ ಅಂತರದಿಂದ ಸೋತಿದ್ದ ವರ್ತೂರು, ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲ್ಲುವ ಕನಸು ಕಂಡಿದ್ದರು. ಆದರೆ ಆಸೆಗೆ ತಣ್ಣೀರು ಬೀಳುವ ಸಾಧ್ಯತೆ ಇದೆ.