ಹೊಸದಿಲ್ಲಿ: ದೇಶದಲ್ಲಿ ಡೆಡ್ಲಿ ಸೋಂಕು ಕೊರೊನಾ ಎರಡನೇ ಅಲೆಯ ಅಬ್ಬರ ಜೋರಾಗಿರುವಾಗಲೇ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಆರ್ಥಿಕ ನೆರವು ನಿಡಿದೆ. ಹೌದು, ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಪತ್ರಿಕಾಗೋಷ್ಠಿ ನಡೆಸಿ ದೇಶದಲ್ಲಿಯ ಆರೋಗ್ಯ ತುರ್ತುಪರಿಸ್ಥಿತಿಯಲ್ಲಿ ಸಾಮಾನ್ಯ ಜನರು, ಬ್ಯಾಂಕ್ ಗಳು, ಉದ್ದಿಮೆಗಳು ಮತ್ತು ಇತರರಿಗೆ ನೆರವಾಗಲು ಕೆಲವು ಕ್ರಮಗಳನ್ನು ಘೋಷಿಸಿದ್ದಾರೆ.
1.ತುರ್ತು ಆರೋಗ್ಯ ಸೇವೆಗಳು ಲಭ್ಯವಾಗುವಂತೆ ಆರೋಗ್ಯ ಕ್ಷೇತ್ರಕ್ಕೆ ಹಣಕಾಸಿನ ಲಭ್ಯತೆಯನ್ನು ಖಚಿತಪಡಿಸಲು 50,000 ಕೊಟಿ ರೂ. ಸಾಲ ಯೋಜನೆಯನ್ನು ಶಕ್ತಿಕಾಂತ್ ದಾಸ್ ಪ್ರಕಟಿಸಿದ್ದಾರೆ. 2022ರ ಮಾರ್ಚ್ 31ರವರೆಗೆ ಈ ಯೋಜನೆ ಲಭ್ಯವಿದ್ದು, ರೆಪೋ ದರದಲ್ಲಿ ಬಡ್ಡಿ ಇರಲಿದೆ. ಇದರ ಅಡಿಯಲ್ಲಿ ಬ್ಯಾಂಕ್ ಳಿಗೆ ಲಸಿಕೆ ಉತ್ಪಾದಕರು, ಪೂರೈಕೆದಾರರು, ವೈದ್ಯಕೀಯ ಸಲಕರಣೆಗಳ ಖರೀದಿಗೆ, ಆಸ್ಪತ್ರೆಗಳು, ಲ್ಯಾಬ್ ಗಳು, ಔಷಧಗಳ ಉತ್ಪಾದಕರು, ಆಮ್ಲಜನಕ ಮತ್ತು ವೆಂಟಿಲೇಟರ್ ಉತ್ಪಾದಕರು ಮತ್ತು ಪೂರೈಕೆದಾರರು, ಕೊರೊನಾಕ್ಕೆ ಸಂಬಂಧಿಸಿದ ಔಷಧ ಮತ್ತು ಲಸಿಕೆಗಳ ಆಮದುದಾರರು ಮತ್ತು ರೋಗಿಗಳ ಚಿಕಿತ್ಸೆಗೆ ಸಾಲ ಸೌಲಭ್ಯ ನೀಡುವಂತೆ ಆರ್ ಬಿಐ ಹೇಳಿದೆ.
2.ಆಸ್ಪತ್ರೆಗಳು, ಆಮ್ಲಜನಕ ಪೂರೈಕೆದಾರರು, ಲಸಿಕೆ ಆಮದುದಾರರು, ಕೊರೊನಾ ಔಷಧಗಳಿಗಾಗಿ 2022ರ ಮಾರ್ಚ್ 31ರವರೆಗೆ ಬ್ಯಾಂಕುಗಳು ಆದ್ಯತೆಯ ಮೇಲೆ 50,000 ಕೋಟಿ ರೂ. ಸಾಲ ನೀಡಲಿವೆ.
3.25 ಕೋಟಿ ರೂ.ವರೆಗೆ ಸಾಲ ಪಡೆದ ವೈಯಕ್ತಿಕ ಸಾಲಗಾರರು ಮತ್ತು ಸಣ್ಣ ಸಾಲಗಾರರಿಗೆ ತಮ್ಮ ಸಾಲವನ್ನು ಪುನರ್ರಚನೆ ಮಾಡಲು ರಿಸರ್ವ್ ಬ್ಯಾಂಕ್ ಅವಕಾಶ ಕಲ್ಪಿಸಿದ್ದು, ಈ ಹಿಂದೆ ಸಾಲದ ಪುನರ್ರಚನೆ ಮಾಡದವರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ.
4.ಕೆಲವು ವರ್ಗಗಳಿಗೆ ವಿಡಿಯೋ ಆಧಾರಿತ ಕೆವೈಸಿಯನ್ನು ಸಕ್ರಿಯಗೊಳಿಸುವ ಕೆವೈಸಿ ಅನುಸರಣೆ ಮಾನದಂಡಗಳನ್ನು ಸಡಿಲಗೊಳಿಸಲಾಗಿದೆ.
5.ರಾಜ್ಯ ಸರಕಾರಗಳಿಗೆ ಓವರ್ಡ್ರಾಫ್ಟ್ ಸೌಲಭ್ಯವನ್ನು ಪಡೆಯಲು ಸೆಪ್ಟೆಂಬರ್ 30, 2021ರವರೆಗೆ ನಿಯಮಗಳನ್ನು ಸರಳಗೊಳಿಸಲಾಗಿದೆ.
6.ಎಸ್ ಎಲ್ ಟಿಆರ್ ಒ (SLTRO) ಅಡಿಯಲ್ಲಿ ಸಣ್ಣ ಹಣಕಾಸು ಬ್ಯಾಂಕ್ ಗಳಿಗೆ 10,000 ಕೋಟಿ ರೂ. ಮೀಸಲಿಡಲಾಗಿದೆ.