House subsidy : ಸಾಮಾನ್ಯ ಜನರಿಗೆ ಸ್ವಂತ ಮನೆ ನಿರ್ಮಿಸಿಕೊಳ್ಳುವುದು ಕಷ್ಟಕರವಾಗಿರುವ ಈ ಸಂದರ್ಭದಲ್ಲಿ, ಕರ್ನಾಟಕ ಸರ್ಕಾರದ ‘ಆಶ್ರಯ ವಸತಿ ಯೋಜನೆ’ ಬಡ ಮತ್ತು ಮಧ್ಯಮ ವರ್ಗದವರಿಗೆ ಆಶಾಕಿರಣವಾಗಿದೆ. ನಿಮ್ಮಬಳಿ ಸ್ವಂತ ಜಾಗವಿದ್ದು, ಮನೆ ನಿರ್ಮಾಣಕ್ಕೆ ಹಣದ ಸಹಾಯದ ಅಗತ್ಯವಿದ್ದರೆ, ರಾಜೀವ್ ಗಾ೦ಧಿ ವಸತಿ ನಿಗಮವು ಧನಸಹಾಯ ನೀಡಲು ಮು೦ದೆ ಬ೦ದಿದೆ. ಈ ಯೋಜನೆಯು ಅನೇಕರ ಸ್ವಂತ ಮನೆಯ ಕನಸನ್ನು ನನಸಾಗಿಸಲು ಸಹಾಯ ಮಾಡುತ್ತಿದೆ.
ಸ್ವಂತ ಮನೆ ಕನಸಿಗೆ ಸರ್ಕಾರದ ನೆರವು
ರಾಜೀವ್ ಗಾಂಧಿ ವಸತಿ ನಿಗಮವು ಆಶ್ರಯ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಗರಿಷ್ಠ ₹2 ಲಕ್ಷದವರೆಗೆ ಸಹಾಯಧನ ನೀಡುತ್ತಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದ ಬಡ ಕುಟುಂಬಗಳು ಇದರ ಲಾಭ ಪಡೆಯಬಹುದು. ಅರ್ಹರಾಗಲು ವಾರ್ಷಿಕ ಆದಾಯ ₹3 ಲಕ್ಷಕ್ಕಿಂತ ಕಡಿಮೆ ಇರಬೇಕು ಮತ್ತು ಸ್ವಂತ ಪಕ್ಕಾ ಮನೆ ಹೊಂದಿರಬಾರದು.
ಸಹಾಯಧನ ವರ್ಗವಾರು ಹಂಚಿಕೆ
ಈ ಯೋಜನೆಯಡಿ, ಸಹಾಯಧನವನ್ನು ಫಲಾನುಭವಿಗಳ ವರ್ಗ ಮತ್ತು ವಾಸಸ್ಥಳಕ್ಕೆ ಅನುಗುಣವಾಗಿ ಹಂಚಿಕೆ ಮಾಡಲಾಗಿದೆ. ನಗರ ಪ್ರದೇಶದ ನಿವಾಸಿಗಳಿಗೆ ₹2.0 ಲಕ್ಷ, ಪರಿಶಿಷ್ಟ ಜಾತಿ/ಪಂಗಡ (SC/ST) ದವರಿಗೆ ₹1.75 ಲಕ್ಷ, ಮತ್ತು ಸಾಮಾನ್ಯ ವರ್ಗದವರಿಗೆ ₹1.2 ಲಕ್ಷ ಸಹಾಯಧನ ನೀಡಲಾಗುತ್ತದೆ. ಇದು ವಿವಿಧ ವರ್ಗದ ಜನರಿಗೆ ಆರ್ಥಿಕ ನೆರವು ನೀಡುವ ಉದ್ದೇಶವನ್ನು ಹೊಂದಿದೆ.
ಇವರು ಅರ್ಹರು
ರಾಜೀವ್ ಗಾಂಧಿ ವಸತಿ ನಿಗಮದ ಯೋಜನೆಯಡಿ ಮನೆ ನಿರ್ಮಿಸಲು ಕರ್ನಾಟಕದ ಖಾಯಂ ನಿವಾಸಿಗಳು, ಕನಿಷ್ಠ 18 ವರ್ಷ ವಯಸ್ಸಿನವರು, ವಾರ್ಷಿಕ ₹3 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವವರು, ಸ್ವಂತ ಮನೆ ಇಲ್ಲದವರು ಅರ್ಜಿ ಸಲ್ಲಿಸಬಹುದು. ಈ ಹಿಂದೆ ಸರ್ಕಾರದ ಯಾವುದೇ ವಸತಿ ಯೋಜನೆಯಡಿ ಸೌಲಭ್ಯ ಪಡೆದಿದ್ದರೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅರ್ಹರಲ್ಲ.
ಕಚೇರಿ ಅಥವಾ ಆನ್ಲೈನ್ ಮೂಲಕ ಸಲ್ಲಿಕೆ
ಗ್ರಾಮ ಪಂಚಾಯಿತಿ ಅಥವಾ ನಗರ ಸ್ಥಳೀಯ ಸಂಸ್ಥೆಯ ಕಚೇರಿಗೆ ಭೇಟಿ ನೀಡಿ ಅಥವಾ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕೃತ ವೆಬ್ ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್ ಮತ್ತು ಮನೆ ನಿರ್ಮಿಸುವ ಜಾಗದ ದಾಖಲೆಗಳು ಅಗತ್ಯವಿದೆ




