Navratri 2025 Day 2 | ದೇವಿ ನವರಾತ್ರಿಯ ದ್ವಿತೀಯ ದಿನವು ಬ್ರಹ್ಮಚಾರಿಣಿ ದೇವಿಯ ಆರಾಧನೆಗೆ ಸಮರ್ಪಿತವಾಗಿದೆ. ತಪಸ್ಸು, ತ್ಯಾಗ ಮತ್ತು ಸದ್ಗುಣಗಳ ಸಂಕೇತವಾದ ಇವರು, ಭಕ್ತರಲ್ಲಿ ಶಾಂತಿ, ಧೈರ್ಯ ಮತ್ತು ಉನ್ನತ ಗುಣಗಳನ್ನು ಬೆಳೆಸುತ್ತಾರೆ. ಮಲ್ಲಿಗೆ ಹೂ, ಶ್ವೇತ ಪುಷ್ಪಗಳು ಹಾಗೂ ತುಪ್ಪದ ದೀಪದೊಂದಿಗೆ ಮಾಡಿದ ಪೂಜೆ, ಭಕ್ತರ ಜೀವನದಲ್ಲಿ ಶುಭಫಲಗಳನ್ನು ತರುತ್ತದೆ.
ಆರಾಧನೆ ವಿಧಾನ

ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಲು ವಿಶಿಷ್ಟ ವಿಧಾನವಿದೆ:
ಕಲಶ ಸ್ಥಾಪನೆ: ದೇವಿಯನ್ನು ಕಲಶದಲ್ಲಿ ಆವಾಹನೆ ಮಾಡಿ ಪೂಜಿಸಬೇಕು.
ಪುಷ್ಪಗಳ ಬಳಕೆ: ಮಲ್ಲಿಗೆ ಹಾಗೂ ಶ್ವೇತ ಹೂಗಳನ್ನು ಅರ್ಪಿಸುವುದು ಶುಭಕರ.
ದೀಪ ಬೆಳಗಿಸುವುದು: ತುಪ್ಪದ ದೀಪ ಹಚ್ಚಿ, ದುರ್ಗಾ ಸಪ್ತಶತಿ ಅಥವಾ ಬ್ರಹ್ಮಚಾರಿಣಿ ಮ೦ತ್ರ ಪಠಿಸಬೇಕು.
ನೈವೇದ್ಯ ಅರ್ಪಣೆ: ಹಲ್ವಾ, ಹಣ್ಣುಗಳು ಹಾಗೂ ಸಿಹಿ ಪದಾರ್ಥಗಳನ್ನು ನೈವೇದ್ಯವಾಗಿ ಅರ್ಪಿಸಬೇಕು.
ಆರತಿ: ಸಂಜೆ ವೇಳೆ ನೈವೇದ್ಯ ಸಮರ್ಪಿಸಿ ಭಕ್ತಿ ಭಾವದಿಂದ ಆರತಿ ಮಾಡಬೇಕು.
ಬಾಗಿನ ಸಮರ್ಪಣೆ: ಸಂಧ್ಯಾಕಾಲದಲ್ಲಿ ಮುತ್ತೈದೆಯರಿಗೆ ಅರಿಶಿನ-ಕುಂಕುಮ ಅಥವಾ ಬಾಗಿನ ಸಮರ್ಪಿಸುವುದು ಪೂರ್ಣ ಫಲದಾಯಕ.
ಬ್ರಹ್ಮಚಾರಿಣಿ ದೇವಿಯ ಮಹತ್ವ
ಬ್ರಹ್ಮಚಾರಿಣಿ ದೇವಿಯ ತಪಸ್ವಿನಿ ರೂಪವು ಪಾರ್ವತಿಯ ತ್ಯಾಗಮಯ ತಪಸ್ಸನ್ನು ಪ್ರತಿಬಿಂಬಿಸುತ್ತದೆ. ಆಕೆಯ ಆರಾಧನೆಯಿ೦ದ ದುರ್ಗುಣಗಳು ನಿವಾರಣೆಯಾಗುತ್ತವೆ, ಸದ್ಗುಣಗಳು ಬೆಳೆಯುತ್ತವೆ. ಕಷ್ಟಗಳಲ್ಲಿ ಇರುವ ಭಕ್ತರಿಗೆ ಅನಿರೀಕ್ಷಿತ ಸಹಾಯ ದೊರೆಯುತ್ತದೆ. ತಮ್ಮಗುರಿಗಳನ್ನು ಸಾಧಿಸಲು ಬಯಸುವವರು ಇವರನ್ನು ಪ್ರಾರ್ಥಿಸಿದರೆ, ಜೀವನದಲ್ಲಿ ನೆಮ್ಮದಿ ಹಾಗೂ ಯಶಸ್ಸು ಪಡೆಯುತ್ತಾರೆ.
ದೇವಿಯ ಆರಾಧನೆ
ಶುಭ ಮ೦ತ್ರ – ‘ಓಂ ಬ್ರಹ್ಮಚಾರಿಣ್ಯ ನಮಃ’ ಜಪಿಸಿದರೆ ಶಾಂತಿ, ಆತ್ಮವಿಶ್ವಾಸ ಮತ್ತು ಯಶಸ್ಸು ಲಭಿಸುತ್ತದೆ. ಬ್ರಹ್ಮಚಾರಿಣಿ ದೇವಿಯ ಆರಾಧನೆ ಭಕ್ತರಲ್ಲಿ ಧೈರ್ಯ, ತಾಳ್ಮೆ ಬೆಳೆಸುತ್ತದೆ. ನವರಾತ್ರಿಯ ಈ ದ್ವಿತೀಯ ದಿನವು ಭಕ್ತರಿಗೆ ಹೊಸ ಶಕ್ತಿ ಮತ್ತು ವಿಶ್ವಾಸ ತುಂಬುವ ವಿಶೇಷ ಕ್ಷಣವಾಗಿದೆ.



