ಬಜೆಟ್ 2026: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಬೃಹತ್ ರಾಜ್ಯ ಬಜೆಟ್ ಅನ್ನು ಮಂಡಿಸಿದ್ದು, ರಾಜ್ಯದ ಜನತೆಗೆ ಭರ್ಜರಿ ಕೊಡುಗೆಗಳನ್ನು ನೀಡಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ಎಲ್ಲರ ಕಣ್ಣು ನೆಟ್ಟಿರುವುದು ಜನಸಾಮಾನ್ಯರ ನೆಚ್ಚಿನ ‘ಅನ್ನಭಾಗ್ಯ’ ಯೋಜನೆಯ ಬದಲಾವಣೆ ಹಾಗೂ ಮಹಿಳೆಯರ ‘ಶಕ್ತಿ’ ಯೋಜನೆಯ ಮುಂದುವರಿಕೆಯ ಮೇಲೆ. ರಾಜ್ಯ ಸರ್ಕಾರ ಬಡವರ ಪರವಾದ ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದೆ.
5 ಕೆಜಿ ಅಕ್ಕಿ ಬದಲು ಬಂತು ‘ಇಂದಿರಾ ಕಿಟ್’!
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದ್ದ ಪಡಿತರ ಚೀಟಿದಾರರಿಗೆ 5 ಕೆಜಿ ಹೆಚ್ಚುವರಿ ಅಕ್ಕಿ ನೀಡುವ ವ್ಯವಸ್ಥೆಗೆ ಸರ್ಕಾರ ಬ್ರೇಕ್ ಹಾಕಿದೆ. ಅದರ ಬದಲಾಗಿ ಇನ್ಮುಂದೆ ರಾಜ್ಯದ ಬಡ ಜನತೆಗೆ ‘ಇಂದಿರಾ ಕಿಟ್’ (Indira Kit) ವಿತರಿಸಲು ಸಿಎಂ ಸಿದ್ದರಾಮಯ್ಯ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.
ಬಡ ಕುಟುಂಬಗಳಿಗೆ ದಿನಬಳಕೆಯ ಅಗತ್ಯ ವಸ್ತುಗಳನ್ನು ಒದಗಿಸುವ ಈ ‘ಇಂದಿರಾ ಕಿಟ್’ ಯೋಜನೆಗಾಗಿ ಬಜೆಟ್ನಲ್ಲಿ ಬರೋಬ್ಬರಿ 68,200 ಕೋಟಿ ರೂಪಾಯಿಗಳ ಬೃಹತ್ ಅನುದಾನ ಮೀಸಲಿಡಲಾಗಿದೆ. ಇದು ರಾಜ್ಯದ ಜನತೆಯ ದೈನಂದಿನ ಬದುಕಿನಲ್ಲಿ ಗಮನಾರ್ಹ ಬದಲಾವಣೆ ತರಲಿದೆ ಎನ್ನಲಾಗಿದೆ.
ಶಕ್ತಿ ಯೋಜನೆಗೆ 5,300 ಕೋಟಿ ರೂ. ಮೀಸಲು
ಮಹಿಳೆಯರ ಫೇವರಿಟ್ ಯೋಜನೆಯಾದ ಉಚಿತ ಬಸ್ ಪ್ರಯಾಣದ ‘ಶಕ್ತಿ ಯೋಜನೆ’ (Shakti Yojana) ಯಶಸ್ವಿಯಾಗಿ ಮುಂದುವರಿಯಲಿದೆ. ಈ ಯೋಜನೆಗಾಗಿ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್ನಲ್ಲಿ 5,300 ಕೋಟಿ ರೂಪಾಯಿಗಳನ್ನು ಎತ್ತಿಟ್ಟಿದೆ. ಈ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರ ತನ್ನ ಬದ್ಧತೆಯನ್ನು ಮತ್ತೆ ಸಾಬೀತುಪಡಿಸಿದೆ.
ವೈಷ್ಣೋದೇವಿ ಯಾತ್ರಿಕರಿಗೆ ಸರ್ಕಾರದ ಗಿಫ್ಟ್
ಇದೇ ವೇಳೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಭಕ್ತರಿಗೂ ಸರ್ಕಾರ ಸಿಹಿಸುದ್ದಿ ನೀಡಿದೆ. ಜಮ್ಮು-ಕಾಶ್ಮೀರದ ಪವಿತ್ರ ‘ವೈಷ್ಣೋದೇವಿ’ (Vaishno Devi) ದರ್ಶನಕ್ಕೆ ತೆರಳುವ ರಾಜ್ಯದ ಯಾತ್ರಿಕರಿಗೆ ತಲಾ 5,000 ರೂಪಾಯಿಗಳ ಸಹಾಯಧನ (Subsidy) ನೀಡುವುದಾಗಿ ಬಜೆಟ್ನಲ್ಲಿ ಘೋಷಿಸಲಾಗಿದೆ.




