ಬಳ್ಳಾರಿ: ಪುರಸಭೆ ಚುನಾವಣೆ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಗಲಾಟೆಗೆ ಹಗರಿಬೊಮ್ಮನಹಳ್ಳಿ ಪುರಸಭೆ ಆವರಣ ಸಾಕ್ಷಿಯಾಗಿದ್ದು, ಕಾಂಗ್ರೆಸ್ನ ಹಾಲಿ ಶಾಸಕ ಭೀಮನಾಯ್ಕ ಅವರು ಭುಜತಟ್ಟಿ ಸವಾಲು ಹಾಕಿರುವ ದೃಶ್ಯ ಸದ್ಯ ವೈರಲ್ ಆಗಿದೆ.
ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವೇಳೆ ವಾಗ್ವಾದ ನಡೆದಿದ್ದು, ಘಟನೆಗೆ ಬಿಜೆಪಿ ಕಾರಣ ಎಂದು ಕಾಂಗ್ರೆಸ್ ಶಾಸಕ ಭೀಮಾನಾಯ್ಕ ತಿಳಿಸಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ. ಇಲ್ಲಿಗೆ ಆಂಧ್ರದಿಂದ ಗೂಂಡಾಗಳನ್ನು ಕರೆಸಲಾಗುತ್ತಿದೆ ಎಂದು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.
ಶಾಸಕರ ವಿರುದ್ಧ ಪ್ರತಿಭಟನೆ
ಬಿಜೆಪಿಯ ಮಾಜಿ ಶಾಸಕ ನೇಮಿರಾಜ್ ಹಾಗೂ ಬಿಜೆಪಿ ಕಾರ್ಯಕರ್ತರು ಹಗರಿಬೊಮ್ಮನಹಳ್ಳಿ ಪುರಸಭೆ ಕಚೇರಿ ಮುಂದೆ ಭೀಮಾನಾಯ್ಕ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಕೆಲ ಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಈ ವೇಳೆ ಸಿಟ್ಟಿನಿಂದ ಶಾಸಕ ಭೀಮನಾಯ್ಕ ಭುಜ ತಟ್ಟಿ ಬಿಜೆಪಿ ಮುಖಂಡರಿಗೆ ಸವಾಲ್ ಹಾಕಿರುವ ದೃಶ್ಯ ಸೆರೆಯಾಗಿದೆ.
ಕಾಂಗ್ರೆಸ್ ಪಾಲಾದ ಹಗರಿಬೊಮ್ಮನಹಳ್ಳಿ ಪುರಸಭೆ
ಬಹು ಸಂಖ್ಯೆ ಹೊಂದಿರುವ ಕಾಂಗ್ರೆಸ್ ಗೆ ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಒಲಿದೆ. ಕಾಂಗ್ರೆಸ್ ನ ನಾಲ್ವರು ಸದಸ್ಯರು ಕ್ರಾಸ್ ಓಟ್ ಮಾಡಿದರೂ ಉಭಯ ಸ್ಥಾನಗಳು ಕೈ ವಶವಾಗಿವೆ. ಆದರೆ ಇದನ್ನು ಸಹಿಸ ಬಿಜೆಪಿ ಮುಖಂಡರು ಅಧಿಕಾರ ತಪ್ಪಿಸುವ ಹುನ್ನಾರ ನಡೆಸಿದ್ದಾರೆ ಎಂದು ಶಾಸಕ ಭೀಮಾನಾಯ್ಕ ಆರೋಪಿಸಿದ್ದಾರೆ.




