Funeral Relief Scheme | ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ರಾಜ್ಯದ ನೋಂದಾಯಿತ ಕಟ್ಟಡ ಕಾರ್ಮಿಕರ ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ಅಂತ್ಯಸಂಸ್ಕಾರ ಪರಿಹಾರ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ, ಕಾರ್ಮಿಕರು ನಿಧನರಾದಾಗ ಅವರ ಕುಟುಂಬಕ್ಕೆ ಅಂತ್ಯಕ್ರಿಯೆ ವೆಚ್ಚ ಹಾಗೂ ಪರಿಹಾರ ಧನ ನೀಡಲಾಗುತ್ತದೆ. ಕಾರ್ಮಿಕರ ಹಠಾತ್ ಮರಣದಿಂದ ಉಂಟಾಗುವ ಆರ್ಥಿಕ ಸಂಕಷ್ಟವನ್ನು ತಗ್ಗಿಸಲು ಈ ಯೋಜನೆ ಸಹಾಯಕವಾಗಿದೆ.
ಆರ್ಥಿಕ ನೆರವು
ಜುಲೈ 16, 2025 ರಂದು ಅಥವಾ ನಂತರ ಮೃತರಾದ ಕಾರ್ಮಿಕರ ನಾಮಿನಿಯು ₹1,50,000 ರೂ. ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ. ಇದರಲ್ಲಿ ₹4,000 ಅಂತ್ಯಸಂಸ್ಕಾರ ವೆಚ್ಚಕ್ಕೆ ಮತ್ತು ₹1,46,000 ಪರಿಹಾರ ಧನವಾಗಿ ನೀಡಲಾಗುತ್ತದೆ. ಆದರೆ ಈ ದಿನಾಂಕಕ್ಕಿಂತ ಮು೦ಚೆ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ₹75,000 ರೂ. ಪರಿಹಾರ ಲಭ್ಯವಾಗುತ್ತದೆ. ಈ ಕ್ರಮವು ಕಾರ್ಮಿಕರ ಕುಟುಂಬಗಳಿಗೆ ತುರ್ತು ಆರ್ಥಿಕ ನೆರವು ಒದಗಿಸಿ, ಬದುಕು ಮರುನಿರ್ಮಿಸಲು ನೆರವಾಗುತ್ತದೆ.
ಅಗತ್ಯ ದಾಖಲೆಗಳು
ಯೋಜನೆಯ ಪ್ರಯೋಜನ ಪಡೆಯಲು ಮೃತ ಕಾರ್ಮಿಕರು ಮಂಡಳಿಯಲ್ಲಿ ನೋ೦ದಾಯಿತರಾಗಿರಬೇಕು ಮತ್ತು ಅವರ ನೋಂದಣಿ ಸಕ್ರಿಯವಾಗಿರಬೇಕು. ಮರಣ ಪ್ರಮಾಣಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ ಉದ್ಯೋಗದಾತರಿಂದ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ನಮೂನೆ XVIII (Form XVIII) ರಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಮರಣ ದಿನಾಂಕದಿಂದ ಒ೦ದು ವರ್ಷದೊಳಗೆ ಸಲ್ಲಿಸುವುದು ಕಡ್ಡಾಯವಾಗಿದೆ.
ಅಧಿಕೃತ ವೆಬ್ಸೈಟ್
ಅರ್ಜಿಯನ್ನು ಆನ್ಲೈನ್ ಮೂಲಕ ಕೂಡ ಸಲ್ಲಿಸಬಹುದು. ಇದರಿಗಾಗಿ ಅಧಿಕೃತ ವೆಬ್ಸೈಟ್ https://kbocwwb.karnataka.gov.in ಗೆ ಭೇಟಿ ನೀಡಿ, ಹೊಸ ಕಟ್ಟಡ ಕಾರ್ಮಿಕರ ನೋಂದಣಿ ಅಥವಾ ನವೀಕರಣ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಪ್ರತಿ ಮೂರು ವರ್ಷಗಳಿಗೊಮ್ಮೆ ನೋಂದಣಿ ನವೀಕರಿಸಬೇಕು, ಇಲ್ಲದಿದ್ದರೆ ಸದಸ್ಯತ್ವ ಅಮಾನ್ಯವಾಗುತ್ತದೆ.
ಭದ್ರತಾ ಬದ್ಧತೆಯ ಪ್ರತೀಕ
ಈ ಯೋಜನೆ, ಕಾರ್ಮಿಕರ ಕುಟುಂಬಕ್ಕೆ ಕಷ್ಟದ ಸಮಯದಲ್ಲಿ ಆರ್ಥಿಕ ನೆರವು ನೀಡುವುದರ ಜೊತೆಗೆ, ಸರ್ಕಾರದ ಸಾಮಾಜಿಕ ಭದ್ರತಾ ಬದ್ಧತೆಯ ಪ್ರತೀಕವಾಗಿದೆ. ಕಟ್ಟಡ ಕಾರ್ಮಿಕರ ದುಡಿಮೆ ಸಮಾಜದ ಅಭಿವೃದ್ಧಿಗೆ ಕಲ್ಲುಗಟ್ಟಿ ಇದ್ದಂತೆ, ಅವರ ಕುಟು೦ಬಕ್ಕೆ ಬೆಂಬಲ ನೀಡುವುದು ರಾಜ್ಯದ ನೈತಿಕ ಹೊಣೆಗಾರಿಕೆ.




