ರಾಜ್ಯದಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯಿದೆ ಜಾರಿಯಾದ ಬಳಿಕ ಮೊದಲ ಪ್ರಕರಣ ದಾಖಲಾಗಿದ್ದು, ಈ ಕುರಿತು ಯಶವಂತಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಿ.ಕೆ.ನಗರದ ನಿವಾಸಿ ಸೈಯದ್ ಮೊಯೀನ್(23) ಎಂಬಾತನನ್ನು ಬಂಧಿಸಲಾಗಿದೆ.
ಯುವಕ, ಯುವತಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯು 18ರ ಹಿಂದೂ ಯುವತಿಯನ್ನು ಅ.5ರಂದು ಆಂಧ್ರ ಪ್ರದೇಶಕ್ಕೆ ಕರೆದೊಯ್ದು ಮತಾಂತರ ಮಾಡಿಸಿದ್ದ. ಈ ಬಗ್ಗೆ ಯುವತಿ ತಾಯಿ ದೂರು ನೀಡಿದ್ದರು.
ಹಿಂದೂ ಧರ್ಮ ತೊರೆದ 350 ಜನ: ಬಾಬಾ ಸಾಹೇಬರ ಮೊಮ್ಮಗಳೇ ಸಾಕ್ಷಿ
ಇನ್ನು, ಡಾ.ಬಿ.ಆರ್.ಅಂಬೇಡ್ಕರ್ ಅವರ 66ನೇ ಧಮ್ಮ ಚಕ್ರ ಪರಿವರ್ತನಾ ದಿನ ಹಿನ್ನೆಲೆ ಯಾದಗಿರಿ ಜಿಲ್ಲೆಯ ಸುರಪುರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ 350 ಮಂದಿ ಹಿಂದೂ ಧರ್ಮ ತೊರೆದು ಬೌದ್ಧ ಧರ್ಮಕ್ಕೆ ಸೇರ್ಪಡೆಗೊಂಡಿದ್ದು, ಇದಕ್ಕೆ ಅಂಬೇಡ್ಕರ್ ಮೊಮ್ಮಗಳು ರಮಾತಾಯಿ ಮತ್ತು 14 ಬೌದ್ಧ ಬಿಕ್ಕುಗಳು ಸಾಕ್ಷಿಯಾದರು.
ಬಳಿಕ ಮಾತನಾಡಿದ ರಮಾತಾಯಿ ಅವರು, ಬೌದ್ಧ ಧರ್ಮ ಜಗತ್ತಿನಲ್ಲಿಯೇ ವೈಜ್ಞಾನಿಕ ಧರ್ಮವಾಗಿದ್ದು, ಈ ಧರ್ಮದಿಂದ ಮಾತ್ರ ದಲಿತರ ಸುಧಾರಣೆ ಸಾಧ್ಯವೆಂದು ಅಭಿಪ್ರಾಯಪಟ್ಟಿದ್ದಾರೆ.