ಭಗವದ್ಗೀತೆ (ಅಧ್ಯಾಯ 1: ಅರ್ಜುನ ವಿಷಾದ ಯೋಗ): ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ಎದುರಾಳಿಗಳಾಗಿ ನಿಂತಿರುವ ತನ್ನದೇ ರಕ್ತಸಂಬಂಧಿಗಳನ್ನು ಕಂಡು ಮಹಾವೀರ ಅರ್ಜುನ ಸಂಪೂರ್ಣವಾಗಿ ಕಂಗೆಡುತ್ತಾನೆ. ಯುದ್ಧ ಮಾಡದಿರಲು ನಿರ್ಧರಿಸುವ ಆತ, ಶಸ್ತ್ರ ತ್ಯಜಿಸುವುದನ್ನು ಸಮರ್ಥಿಸಿಕೊಳ್ಳಲು ಸಾರಥಿ ಶ್ರೀಕೃಷ್ಣನ ಮುಂದೆ ಸಾಲು ಸಾಲು ಕಾರಣಗಳನ್ನು ಮುಂದಿಡುತ್ತಾನೆ. ಯುದ್ಧದಿಂದ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬುದನ್ನು ಭಗವದ್ಗೀತೆಯ 1ನೇ ಅಧ್ಯಾಯದ 37 ರಿಂದ 43ನೇ ಶ್ಲೋಕಗಳಲ್ಲಿ ಅರ್ಜುನ ಹೀಗೆ ವಿವರಿಸುತ್ತಾನೆ:
ತಪ್ಪಿನ ಅರಿವಿದ್ದೂ ನಾವೇಕೆ ಪಾಪ ಮಾಡಬೇಕು? (ಶ್ಲೋಕ 37, 38 & 39)
ಸ್ವಜನಂ ಹಿ ಕಥಂ ಹತ್ವಾ ಸುಖಿನಃ ಸ್ಯಾಮ ಮಾಧವ…
ವಿವರಣೆ: ಕೃಷ್ಣನಿಗೆ ಅರ್ಜುನ ಪ್ರಶ್ನಿಸುತ್ತಾನೆ, “ಮಾಧವ, ನಮ್ಮವರೇ ಆದ ಕೌರವರನ್ನು ಕೊಂದು ನಾವು ಹೇಗೆ ತಾನೇ ನೆಮ್ಮದಿಯಿಂದ ಬದುಕಲು ಸಾಧ್ಯ? ಅಧಿಕಾರ ಮತ್ತು ದುರಾಸೆಯಿಂದ ಕೌರವರ ಕಣ್ಣು ಮುಚ್ಚಿಹೋಗಿದೆ. ಹೀಗಾಗಿ ಯುದ್ಧದಿಂದಾಗುವ ವಂಶನಾಶ ಮತ್ತು ಮಿತ್ರದ್ರೋಹದ ಪಾಪ ಅವರಿಗೆ ಕಾಣುತ್ತಿಲ್ಲ. ಆದರೆ, ಎಲ್ಲವೂ ಗೊತ್ತಿರುವ ನಾವು, ಇಂಥದ್ದೊಂದು ಮಹಾಪಾಪ ಮಾಡಲು ಹೇಗೆ ತಾನೇ ಮುಂದಾಗಬೇಕು? ಇದರಿಂದ ದೂರ ಉಳಿಯುವುದೇ ವಿವೇಕವಲ್ಲವೇ?” ಎನ್ನುತ್ತಾನೆ.
ವಂಶ ನಾಶವಾದರೆ ಧರ್ಮವೂ ನಾಶ (ಶ್ಲೋಕ 40)
ಕುಲಕ್ಷಯೇ ಪ್ರಣಶ್ಯಂತಿ ಕುಲಧರ್ಮಾಃ ಸನಾತನಾಃ…
ವಿವರಣೆ: ಯುದ್ಧದ ಘೋರ ಪರಿಣಾಮವನ್ನು ವಿವರಿಸುವ ಅರ್ಜುನ, “ಈ ಕಾಳಗದಲ್ಲಿ ನಮ್ಮ ಇಡೀ ಕುಲವೇ ನಾಶವಾಗುತ್ತದೆ. ಹಿರಿಯರು ಸತ್ತಾಗ, ತಲೆತಲೆಮಾರುಗಳಿಂದ ನಡೆದುಕೊಂಡು ಬಂದಂತಹ ಅಳಿವಿರದ ಸನಾತನ ಕುಲಧರ್ಮಗಳು ಕಣ್ಮರೆಯಾಗುತ್ತವೆ. ಧರ್ಮವು ಮರೆಯಾದರೆ ಆ ಇಡೀ ವಂಶವನ್ನು ಅಧರ್ಮ ಆವರಿಸಿಕೊಳ್ಳುತ್ತದೆ” ಎಂದು ಆತಂಕಪಡುತ್ತಾನೆ.
ಸಮಾಜದ ಮೇಲೆ ಬೀಳುವ ಕೆಟ್ಟ ಪ್ರಭಾವ (ಶ್ಲೋಕ 41)
ಅಧರ್ಮಾಭಿಭವಾತ್ ಕೃಷ್ಣ ಪ್ರದುಷ್ಯಂತಿ ಕುಲಸ್ತ್ರಿಯಃ…
ವಿವರಣೆ: ಇದು ಅತ್ಯಂತ ಸೂಕ್ಷ್ಮವಾದ ವಿಚಾರ. ಅರ್ಜುನ ಹೇಳುತ್ತಾನೆ, “ಕೃಷ್ಣಾ, ಸಮಾಜದಲ್ಲಿ ಅಧರ್ಮ ತಾಂಡವವಾಡಿದಾಗ ಮತ್ತು ಕುಟುಂಬದ ಯಜಮಾನ (ಪುರುಷರು) ಇಲ್ಲದಾಗ, ಮನೆಯ ಹೆಣ್ಣುಮಕ್ಕಳು ದಾರಿತಪ್ಪುವ ಅಪಾಯವಿರುತ್ತದೆ. ಸ್ತ್ರೀಯರು ದಾರಿಗೆಟ್ಟರೆ, ಸಮಾಜದಲ್ಲಿ ವರ್ಣಸಂಕರ ಉಂಟಾಗುತ್ತದೆ.”
ಪೂರ್ವಜರಿಗೂ ತಪ್ಪಿದ್ದಲ್ಲ ನರಕ (ಶ್ಲೋಕ 42 & 43)
ಸಂಕರೋ ನರಕಾಯ್ಕೆವ ಕುಲಘ್ನಾನಾಂ ಕುಲಸ್ಯ ಚ…
ವಿವರಣೆ: “ಈ ವರ್ಣಸಂಕರ ಎಂಬುದು ಇಡೀ ವಂಶವನ್ನು ಮತ್ತು ಆ ವಂಶವನ್ನು ನಾಶ ಮಾಡಿದವರನ್ನು ನೇರವಾಗಿ ನರಕಕ್ಕೆ ತಳ್ಳುತ್ತದೆ. ಸರಿಯಾದ ಸಂಸ್ಕಾರವಿಲ್ಲದ ಪೀಳಿಗೆಯಿಂದ ಪಿಂಡ-ತರ್ಪಣಗಳು ಸಿಗದೆ, ನಮ್ಮ ಪೂರ್ವಜರೂ (Ancestors) ನರಕದಲ್ಲಿ ನರಳಬೇಕಾಗುತ್ತದೆ. ಕುಲಗೇಡಿಗಳ ಇಂಥ ತಪ್ಪುಗಳಿಂದ ಸಮಾಜದ ಶಾಶ್ವತವಾದ ಜಾತಿಧರ್ಮ ಮತ್ತು ಕುಲಧರ್ಮಗಳು ಸಂಪೂರ್ಣವಾಗಿ ನೆಲೆಗೆಡುತ್ತವೆ” ಎಂದು ಅರ್ಜುನ ವಿವರಿಸುತ್ತಾನೆ.
ಇಲ್ಲಿ ಅರ್ಜುನ ಯುದ್ಧ ಮಾಡದಿರಲು ಬಹಳ ದೊಡ್ಡ ‘ಧರ್ಮ’ದ ಮಾತುಗಳನ್ನೇ ಆಡುತ್ತಿದ್ದಾನೆ. ಆದರೆ ಶ್ರೀಕೃಷ್ಣನಿಗೆ ಮಾತ್ರ ಅರ್ಜುನನ ಈ ಮಾತುಗಳ ಹಿಂದಿರುವ ‘ಮೋಹ’ ಮತ್ತು ‘ಭಯ’ ಸ್ಪಷ್ಟವಾಗಿ ತಿಳಿದಿದೆ. ಕರ್ತವ್ಯದಿಂದ ವಿಮುಖನಾಗಲು ಮನುಷ್ಯ ಹೇಗೆಲ್ಲಾ ನೆಪಗಳನ್ನು ಹುಡುಕುತ್ತಾನೆ ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆ.




