ಆಧ್ಯಾತ್ಮಿಕ ಚಿಂತನೆ: ಮಹಾಭಾರತ ಯುದ್ಧದ ಆರಂಭದಲ್ಲಿ ಕೌರವರ ಪಡೆಯಿಂದ ಭೀಷ್ಮ ಪಿತಾಮಹರು ಶಂಖ ಮೊಳಗಿಸಿದ ಬಳಿಕ, ಪಾಂಡವರ ಕಡೆಯಿಂದ ಭಾರಿ ಪ್ರತ್ಯುತ್ತರ ಸಿಗುತ್ತದೆ. ಭಗವದ್ಗೀತೆಯ ಮೊದಲ ಅಧ್ಯಾಯದ (ಅರ್ಜುನ ವಿಷಾದ ಯೋಗ) 15 ರಿಂದ 21ನೇ ಶ್ಲೋಕಗಳಲ್ಲಿ, ಪಾಂಡವ ವೀರರು ಮೊಳಗಿಸಿದ ವಿವಿಧ ಶಂಖಗಳ ಹೆಸರುಗಳು ಹಾಗೂ ಯುದ್ಧಕ್ಕೆ ಸಜ್ಜಾದ ಅರ್ಜುನನ ಆಜ್ಞೆಯನ್ನು ಸಂಜಯನು ಧೃತರಾಷ್ಟ್ರನಿಗೆ ಎಳೆಎಳೆಯಾಗಿ ವಿವರಿಸುತ್ತಾನೆ. ಅದರ ಸರಳ ಕನ್ನಡ ಅರ್ಥ ಇಲ್ಲಿದೆ:
ಶ್ಲೋಕ 15-18: ಪಾಂಡವ ಪಡೆಯಿಂದ ದಿವ್ಯ ಶಂಖನಾದ!

ಶ್ಲೋಕ 15
ಪಾಂಚಜನ್ಯಂ ಹೃಷೀಕೇಶೋ ದೇವದತ್ತಂ ಧನಂಜಯಃ |
ಪೌಂಡ್ರಂ ದಧೇ ಮಹಾ ಶ೦ಖಂ ಭೀಮಕರ್ಮಾ ವೃಕೋದರಃ ||
ಶ್ಲೋಕ 16
ಅನಂತವಿಜಯಂ ರಾಜಾ ಕುಂತೀಪುತ್ರೋ ಯುಧಿಷ್ಠಿರಃ |
ನಕುಲಃ ಸಹದೇವಶ್ಚ ಸುಘೋಷಮಣಿಪುಷ್ಪಕೌ ॥
ಶ್ಲೋಕ 17
ಕಾಶ್ಯಶ್ಚ ಪರಮೇಶ್ವಾಸಃ ಶಿಖಂಡೀ ಚ ಮಹಾರಥಃ ।
ಧೃಷ್ಟದ್ಯುಮ್ಮೋ ವಿರಾಟಶ್ಚ ಸಾತ್ಯಕಿಶ್ಚಾಪರಾಜಿತಃ ||
ಶ್ಲೋಕ 18
ದ್ರುಪದೋ ದೌಪದೇಯಾಶ್ಚ ಸರ್ವಶಃ ಪೃಥಿವೀಪತೇ ।
ಸೌಭದ್ರಶ್ಚ ಮಹಾಬಾಹುಃ ಶಂಖಾನ್ ದುಮ್ಮುಃ ಪೃಥಕ್ ಪೃಥಕ್ II
ಸರಳ ಅರ್ಥ: ಕೌರವರ ರಣಕಹಳೆಗೆ ಪ್ರತಿಯಾಗಿ ಪಾಂಡವ ಸೇನೆಯ ಮಹಾವೀರರು ಒಬ್ಬೊಬ್ಬರಾಗಿ ತಮ್ಮ ದಿವ್ಯ ಶಂಖಗಳನ್ನು ಊದಿದರು. ಯಾರು ಯಾವ ಶಂಖ ಊದಿದರು ಎಂಬ ವಿವರ ಹೀಗಿದೆ:
ಶ್ರೀಕೃಷ್ಣ: ಪಾಂಚಜನ್ಯ
ಅರ್ಜುನ: ದೇವದತ್ತ
ಭೀಮ: ಪೌಂಡ್ರ (ಮಹಾ ಶಂಖ)
ಯುಧಿಷ್ಠಿರ (ಧರ್ಮರಾಯ): ಅನಂತವಿಜಯ
ನಕುಲ: ಸುಘೋಷ
ಸಹದೇವ: ಮಣಿಪುಷ್ಪಕ
ಇವರಲ್ಲದೆ, ಮಹಾನ್ ಬಿಲ್ಲುಗಾರ ಕಾಶಿರಾಜ, ಮಹಾರಥಿ ಶಿಖಂಡಿ, ಧೃಷ್ಟದ್ಯುಮ್ನ, ವಿರಾಟ, ಅಜೇಯ ಸಾತ್ಯಕಿ, ದ್ರುಪದ, ದ್ರೌಪದಿಯ ಮಕ್ಕಳು ಹಾಗೂ ಸುಭದ್ರೆಯ ಪುತ್ರನಾದ ಮಹಾಪರಾಕ್ರಮಿ ಅಭಿಮನ್ಯು ಕೂಡ ತಮ್ಮ ಶಂಖಗಳನ್ನು ಭಾರಿ ದನಿಯೊಂದಿಗೆ ಮೊಳಗಿಸಿದರು.
ಶ್ಲೋಕ 19: ಕೌರವರ ಎದೆ ನಡುಗಿಸಿದ ಘಳಿಗೆ
ಶ್ಲೋಕ 19
ಸ ಘೋಷೋ ಧಾರ್ತರಾಷ್ಟ್ರಾಣಾಂ ಹೃದಯಾನಿ ವ್ಯದಾರಯತ್ ।
ನಭಶ್ಚ ಪೃಥಿವೀಂ ಚೈವ ತುಮುಲೋ ವ್ಯನುನಾದಯನ್ II
ಸರಳ ಅರ್ಥ: ಸಂಜಯನು ಧೃತರಾಷ್ಟ್ರನಿಗೆ ಹೇಳುತ್ತಾನೆ- “ಓ ರಾಜನೇ, ಪಾಂಡವ ವೀರರೆಲ್ಲರೂ ಒಮ್ಮೆಲೇ ಮೊಳಗಿಸಿದ ಆ ಶಂಖಗಳ ಭಾರಿ ಸದ್ದು ಭೂಮಿ ಮತ್ತು ಆಕಾಶವನ್ನು ಸೀಳುವಂತೆ ಪ್ರತಿಧ್ವನಿಸಿತು. ಆ ಭೀಕರವಾದ ಶಬ್ದವು ನಿನ್ನ ಮಕ್ಕಳಾದ ಕೌರವರ ಎದೆಬಡಿತವನ್ನು ಹೆಚ್ಚಿಸಿ, ಅವರ ಹೃದಯವನ್ನು ನಡುಗಿಸಿತು.”
ಶ್ಲೋಕ 20-21: ರಥವನ್ನು ಮಧ್ಯೆ ನಿಲ್ಲಿಸಲು ಅರ್ಜುನನ ಆಜ್ಞೆ
ಶ್ಲೋಕ 20
ಅಥ ವ್ಯವಸ್ಥಿತಾನ್ ದೃಷ್ಟಾ ಧಾರ್ತರಾಷ್ಟ್ರಾನ್ ಕಪಿಧ್ವಜಃ ।
ಪ್ರವೃತ್ತೇ ಶಸ್ತ್ರಸಂಪಾತೇ ಧನುರುದ್ಯಮ್ಯ ಪಾಂಡವಃ ||
ಹೃಷೀಕೇಶಂ ತದಾ ವಾಕ್ಯಮಿದಮಾಹ ಮಹೀಪತೇ ।
ಶ್ಲೋಕ 21
ಅರ್ಜುನ ಉವಾಚ । ಸೇನಯೋರುಭಯೋರ್ಮಧ್ಯೆ ರಥಂ ಸ್ಥಾಪಯ ಮೇsಚ್ಯುತ ||
ಸರಳ ಅರ್ಥ: ಕಪಿಧ್ವಜವನ್ನು (ಹನುಮಂತನ ಬಾವುಟ) ಹೊಂದಿರುವ ರಥದಲ್ಲಿ ಕುಳಿತಿದ್ದ ಅರ್ಜುನನು, ಯುದ್ಧಕ್ಕೆ ಸಂಪೂರ್ಣವಾಗಿ ಸಜ್ಜಾಗಿ ನಿಂತಿದ್ದ ಕೌರವರ (ಧೃತರಾಷ್ಟ್ರನ ಮಕ್ಕಳ) ಸೈನ್ಯವನ್ನು ದಿಟ್ಟಿಸಿ ನೋಡಿದನು. ಯುದ್ಧ ಶುರುವಾಗುವ ಆ ನಿರ್ಣಾಯಕ ಘಳಿಗೆಯಲ್ಲಿ ತನ್ನ ಬಿಲ್ಲನ್ನು (ಗಾಂಡೀವ) ಕೈಗೆತ್ತಿಕೊಂಡ ಅರ್ಜುನ, ಸಾರಥಿಯಾಗಿದ್ದ ಶ್ರೀಕೃಷ್ಣನಿಗೆ ಹೀಗೆ ಹೇಳಿದನು- “ಓ ಅಚ್ಯುತ (ಶ್ರೀಕೃಷ್ಣ), ದಯವಿಟ್ಟು ನನ್ನ ರಥವನ್ನು ಈ ಎರಡೂ ಸೇನೆಗಳ ಮಧ್ಯಭಾಗದಲ್ಲಿ ತೆಗೆದುಕೊಂಡು ಹೋಗಿ ನಿಲ್ಲಿಸು.”
ತಾತ್ಪರ್ಯ: ಪಾಂಡವರ ಶಂಖನಾದವು ಕೌರವ ಪಡೆಯಲ್ಲಿದ್ದ ಹುಸಿ ಆತ್ಮವಿಶ್ವಾಸವನ್ನು ಅಲುಗಾಡಿಸಿತು. ಇನ್ನೇನು ಯುದ್ಧ ಶುರುವಾಗಬೇಕು ಎನ್ನುವಾಗ, ಶತ್ರುಪಾಲಯದಲ್ಲಿ ಯಾರೆಲ್ಲಾ ಯುದ್ಧ ಮಾಡಲು ಬಂದಿದ್ದಾರೆಂದು ಕಣ್ಣಾರೆ ನೋಡಲು ಅರ್ಜುನ ರಥವನ್ನು ಮಧ್ಯೆ ನಿಲ್ಲಿಸಲು ಹೇಳುತ್ತಾನೆ. ಇಲ್ಲಿಂದಲೇ ‘ಅರ್ಜುನ ವಿಷಾದ ಯೋಗ’ದ (ಗೊಂದಲದ) ಅಸಲಿ ಘಟ್ಟ ಶುರುವಾಗುತ್ತದೆ.




