ಬಳ್ಳಾರಿ,ಏ.22: 2021-22 ಸಾಲಿನ ಮೀನುಗಾರಿಕೆ ಇಲಾಖೆಯ ವತಿಯಿಂಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಿಗೆ ಬಳ್ಳಾರಿ, ಸಿರುಗುಪ್ಪ, ಕಂಪ್ಲಿ, ಕುರುಗೋಡು, ಕೂಡ್ಲಿಗಿ, ಹೆಚ್.ಬಿ.ಹಳ್ಳಿ ಮತ್ತು ಹಡಗಲಿ ತಾಲೂಕಿನ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಬಳ್ಳಾರಿ ಮೀನುಗಾರಿಕೆ ಇಲಾಖೆಯ ಮೀನುಗಾರಿಕೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
2021-22ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಹೊಸದಾಗಿ ಮೀನು ಕೃಷಿ ಕೊಳಗಳ ನಿರ್ಮಾಣ ಹಾಗೂ ಒಳನಾಡು ಮೀನುಗಾರಿಕೆ ಸಂಬಂಧಿಸಿದ ಯೋಜನೆಗಳಾದ ಬಯೋಪ್ಲಾಕ್ ಕೊಳ ನಿರ್ಮಾಣ, ಮೀನು ಮರಿ ಉತ್ಪಾದನೆ ಹಾಗೂ ಪಾಲನಾ ಕೇಂದ್ರಗಳ ನಿರ್ಮಾಣ, ಆರ್ಎಎಸ್ ಘಟಕ ನಿರ್ಮಾಣ, ಶೈತ್ಯಾಗಾರ/ಮಂಜುಗಡ್ಡೆ ಸ್ಥಾವರಗಳ ನಿರ್ಮಾಣ, ಮೀನು ಮಾರಾಟ ಮತ್ತು ಮೀನು ಸಾಗಾಣಿಕೆ ವಾಹನಗಳ ಖರೀದಿಗೆ ಸಹಾಯ, ತಾಜಾ ಮೀನು ಮಾರಾಟ ಮಳಿಗೆಗಳ ಸ್ಥಾಪನೆ ಮತ್ತು ಜೀವಂತ ಮೀನು ಮಾರಾಟ ಕೇಂದ್ರಗಳ ಸ್ಥಾಪನೆಗೆ ಸಹಾಯ ಮತ್ತಿತರ ಚಟುವಟಿಕೆಗಳ ಸಹಾಯಧನ ನೀಡಲಾಗುತ್ತಿದ್ದು ಅರ್ಹರು ಅರ್ಜಿ ಸಲ್ಲಿಸಬಹುದು.
ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸಹಾಯಧನ ಸೌಲಭ್ಯವನ್ನು ಪಡೆಯಲು ಬಯಸುವ ಎಲ್ಲಾ ಫಲಾನುಭವಿಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಆಯ್ಕೆ ಸಮಿತಿಯಲ್ಲಿ ಅನುಮೋದನೆ ಪಡೆಯುವುದು ಕಡ್ಡಾಯವಾಗಿರುತ್ತದೆ, ಆದ್ದರಿಂದ ಇಲಾಖೆಯ ಅನುಮತಿಯನ್ನು ಪಡೆಯದೇ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳಬಾರದೆಂದು ಅವರು ತಿಳಿಸಿದ್ದಾರೆ. ಅರ್ಜಿ ಸಲ್ಲಿಸಲು ಮೇ 15 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ದೂ.ಸಂ:9449593156 ಗೆ ಸಂಪರ್ಕಿಸಬಹುದು.