ಬೆಂಗಳೂರು: ಯಾವುದೇ ಕಾಯ್ದೆ, ಕಾನೂನು ರೂಪಿಸುವಾಗ ಪ್ರಜಾಪ್ರಭುತ್ಸವ ವ್ಯವಸ್ಥೆಯಲ್ಲಿ ಸರ್ಕಾರ ಜನರ ಅಭಿಪ್ರಾಯ ಕೇಳಬೇಕು. ಆದರೆ ನೋವಿನ ಸಂಗತಿ ಏನೆಂದರೆ ಕೊರೊನಾದ ಸಂಕಷ್ಟ ಕಾಲದಲದಲ್ಲಿ ಕೂಡ ಅನ್ನದಾತ ಗುಲಾಮನಾಗಿ ಮಾಡುವಂಥಹ ಕಾನೂನು ರೂಪಿಸಿರುವುದು. ಇಲ್ಲಿಗೆ ಗಾಂಧಿ ಕಂಡ ರಾಮರಾಜ್ಯದ ಕನಸು ಕನಸಾಗೇ ಉಳಿದಿದೆ ಎಂದು ನಟ ಕಿಶೋರ್ ನೋವಿನಿಂದ ನುಡಿದರು.
ರೈತ ಪ್ರತಿಭಟನೆ ವಿಚಾರವಾಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ನಟ ಕಿಶೋರ್, ಬೆಂಕಿ ಇಲ್ಲದೇ ಹೊಗೆಯಾಡಲು ಸಾಧ್ಯವಿಲ್ಲ. ಸರ್ಕಾರ ತಿದ್ದುಪಡಿ ಮಾಡಿದ ಭೂ ಸುಧಾರಣೆ, ಎಪಿಎಂಸಿ ಕಾಯ್ದೆಯಲ್ಲಿ ಸಮಸ್ಯೆ ಇರುವ ಕಾರಣಕ್ಕೆ ಇವತ್ತು ರೈತರು ಬೀದಿಗೆ ಬಂದು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಯಾವುದೋ ಲಾಭದ ನಿರೀಕ್ಷೆಯಲ್ಲಿರುವ ನಾವು ವಾಟ್ಸಾಪ್ ಮೂಲಕ ಪರಸ್ಪರ ಕಿತ್ತಾಡುತ್ತಿದ್ದೇವೆ ಎಂದು ಹೇಳಿದರು.
ಕೊರೋನಾ ಇದೆ ಯಾರೂ ಬೀದಿಗೆ ಬಂದು ಗಲಾಟೆ ಮಾಡಲ್ಲ ಅನ್ನೋದು ಗೊತ್ತಾಗಿ ಬಡವರ, ಕಾರ್ಮಿಕರ ಮತ್ತು ರೈತರ ವಿರೋಧಿ ಕಾನೂನುಗಳನ್ನು ಜಾರಿ ಮಾಡುತ್ತಿರುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ. ನೇರ ರೈತರ ಮೇಲೆ ಪರಿಣಾಮ ಬೀರುವ ಕಾಯ್ದೆಗಳನ್ನು ಚರ್ಚೆ ಮಾಡದೇ ಅನುಷ್ಠಾನ ಮಾಡುತ್ತಿರುವುದು ಆತಂಕದ ಸಂಗತಿ ಎಂದರು.
ಎಪಿಎಂಸಿ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗಳ ಹಿಂದೆ ರೈತರನ್ನು ಗುಲಾಮರನ್ನಾಗಿ ಮಾಡುವ ಹುನ್ನಾರವಿದೆ. ಮೊದಲು ರೈತರಿಗೆ ಹೆಚ್ಚಿನ ಬೆಲೆ ಸಿಗಬಹುದು. ಆದರೆ ನಂತರದ ದಿನಗಳಲ್ಲಿ ರೈತರು ಹಣವಂಥರ ಗುಲಾಮರಾಗುವ ಆತಂಕವಿದೆ. ಅಲ್ಲಿಗೆ ಗಾಂಧಿ ಕಂಡ ಗ್ರಾಮ ಸ್ವರಾಜ್ಯದ ಕನಸು ಕನಸಾಗಿ ಉಳಿದಿದೆ ಎಂದರು.