ಮೈಸೂರು: ಪತ್ನಿಯ ಶೀಲ ಶಂಕಿಸಿ ಪತಿಯೇ ಪತ್ನಿಯ ರುಂಡಮುಂಡ ಬೇರೆಯಾಗುವಂತೆ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಮೈಸೂರಿನ ವರುಣಾ ಪೊಲೀಸ್ ಠಾಣಾ ವ್ಯಾಪ್ತಿಯ ಚೆಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೌದು, ಪುಟ್ಟಮ್ಮ(40) ಕೊಲೆಯಾದ ಮಹಿಳೆಯಾಗಿದ್ದು, ಪತಿ ದೇವರಾಜ್ ಬಂಧನಕ್ಕೆ ವರುಣಾ ಪೊಲೀಸರು ಜಾಲ ಬೀಸಿದ್ದಾರೆ. ಮೊದಲ ಹೆಂಡತಿಯನ್ನೂ ಸಹ ಕೊಲೆ ಮಾಡಲು ಯತ್ನಿಸಿ ಜೈಲು ವಾಸ ಅನುಭವಿಸಿದ್ದ ದೇವರಾಜ್, ನಂತರ ಎರಡನೇ ಮದುವೆಯಾಗಿ ಈಗ ಆಕೆಯನ್ನು ಕೂಡ ಕೊಲೆ ಮಾಡಿದ್ದಾನೆ ಎನ್ನಲಾಗಿದ್ದು, ಮೊದಲ ಹೆಂಡತಿಯಿಂದ ದೂರವಾದ ದೇವರಾಜ್, 21 ವರ್ಷಗಳ ಹಿಂದೆ ಪುಟ್ಟಮ್ಮಳನ್ನು ಎರಡನೇ ವಿವಾಹವಾಗಿದ್ದ.
ಎರಡನೇ ಮದುವೆಯಾದರೂ ಪುಟ್ಟಮ್ಮಳ ಶೀಲ ಶಂಕಿಸಿ ಆಗಾಗ ಜಗಳ ಮಾಡುತ್ತಿದ್ದ ದೇವರಾಜ್, 20 ವರ್ಷದ ಮಗಳಿದ್ದರೂ ಕೂಡ ಪತ್ನಿ ಮೇಲೆ ಶಂಕೆ ವ್ಯಕ್ತಪಡಿಸುತ್ತಿದ್ದ. ಕಳೆದ ಒಂದು ತಿಂಗಳಿಂದ ಪುಟ್ಟಮ್ಮಳಿಗೆ ದೇವರಾಜ್ ಕಿರುಕುಳ ಹೆಚ್ಚಾಗಿತ್ತು. ಮಗಳು ಪವಿತ್ರ ಕಾಲೇಜಿಗೆ ಹೋಗಿದ್ದ ವೇಳೆ ಇದೇ ವಿಚಾರಕ್ಕೆ ಕ್ಯಾತೆ ತೆಗೆದ ದೇವರಾಜ್ ಪತ್ನಿ ಪುಟ್ಟಮ್ಮಳನ್ನು ಭೀಕರವಾಗಿ ಕೊಲೆ ಮಾಡಿ ರುಂಡಮುಂಡವನ್ನು ಬೇರ್ಪಡಿಸಿ ಆಕ್ರೋಶ ತೀರಿಸಿಕೊಂಡಿದ್ದಾನೆ.
ಇದೀಗ ದೇವರಾಜ್ ವಿರುದ್ಧ ಮಗಳು ಪವಿತ್ರ ದೂರು ನೀಡಿದ್ದು, ವರುಣಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ದೇವರಾಜ್ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.