ಬೆಂಗಳೂರು: ಸ್ಯಾಂಡಲ್ವುಡ್ ಕ್ವೀನ್ ಎಂದೇ ಹೆಸರಾಗಿರುವ ನಟಿ ರಮ್ಯಾ ಚಿತ್ರರಂಗದಿಂದ ದೂರವಾಗಿ ರಾಜಕೀಯ ಪ್ರವೇಶ ಎಲ್ಲರಿಗೂ ತಿಳಿದ ವಿಷಯ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಒಂದು ಬಾರಿ ಸಂಸದೆಯಾಗಿ ಆಯ್ಕೆಯಾಗಿದ್ದ ರಮ್ಯಾ ಬಳಿಕ ಅಲ್ಲಿಂದಲೂ ದೂರವಾಗಿದ್ದರು. ಆದರೆ ರಮ್ಯಾಅವರೇ ಹೇಳಿರುವಂತೆ ಮತ್ತೆ ಬೆಳ್ಳಿ ತೆರೆಯ ಮೇಲೆ ಬರಲು ಸಜ್ಜಾಗುತ್ತಿದ್ದಾರೆ.

ಹೌದು, 2003 ರಲ್ಲಿ ನಟ ಪುನೀತ್ ರಾಜ್ಕುಮಾರ್ ಅಭಿನಯದ ‘ಅಭಿ’ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ರಮ್ಯಾ ಒಂದು ದಶಕ ಚಿತ್ರರಂಗದಲ್ಲಿ ಟಾಪ್ ನಟಿಯಾಗಿದ್ದರು ಮೆರೆದಿದ್ದರು. ಕನ್ನಡದಲ್ಲಿ ಮಾತ್ರವಲ್ಲ ತೆಲುಗು, ತಮಿಳು ಸಿನಿಮಾಗಳಲ್ಲಿಯೂ ನಟಿಸಿ ರಮ್ಯಾ ಸೈ ಎನಿಸಿಕೊಂಡರು.

ಆದರೆ 2012 ರಲ್ಲಿ ರಾಜಕೀಯ ಪ್ರವೇಶಿಸಿದ ರಮ್ಯಾ, ಬಳಿಕ ಚಿತ್ರರಂಗದಿಂದ ನಿಧಾನಕ್ಕೆ ನಂಟು ಕಳೆದುಕೊಂಡರು. 2012 ರಲ್ಲಿ ನಾಲ್ಕು ಸಿನಿಮಾದಲ್ಲಿ ನಟಿಸಿದ್ದ ರಮ್ಯಾ ಬಳಿಕ 2014 ರಲ್ಲಿ ಒಂದು ಹಾಗೂ 2016 ರಲ್ಲಿ ಒಂದು ಸಿನಿಮಾದಲ್ಲಷ್ಟೆ ನಟಿಸಿ ಚಿತ್ರರಂಗದಿಂದ ನಿದಾನವಾಗಿ ದೂರ ಸರಿದರು. ಆದರೆ ಇದೀಗ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮತ್ತೆ ನಟನೆ ಕಡೆಗೆ ಮರಳುವ ಉತ್ಸಾಹದಲ್ಲಿದ್ದಾರೆ ಅದಕ್ಕಾಗಿ ತಯಾರಿಯನ್ನೂ ಆರಂಭಿಸಿದ್ದಾರಂತೆ.

ರಾಜಕಾರಣಿ, ಉದ್ಯಮಿ ಆದಿಕೇಶವಲು ಮೊಮ್ಮಗ ಆದಿನಾರಾಯಣ, ಲಾರಾ ಹೆಸರಿನ ಬೀದಿ ನಾಯಿ ಮೇಲೆ ಕಾರು ಹತ್ತಿಸಿ ಕೊಂದ ಘಟನೆಯನ್ನು ಖಂಡಿಸಿದ್ದ ನಟಿ ರಮ್ಯಾ, ಮಂಗಳವಾರ ನಡೆದ ನಾಯಿ ಲಾರಾಳ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದು, ಈ ವೇಳೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಸಿನಿಮಾ ರಂಗಕ್ಕೆ ಮರಳುವುದಾಗಿ ತಿಳಿಸಿದ್ದಾರೆ.




