ಚೆಂಬೆಳಕಿನ ಕವಿ, ನಾಡೋಜ ಚನ್ನವೀರ ಕಣವಿ (93) ಅವರು ವಿಧಿವಶರಾಗಿದ್ದಾರೆ. ಕೋವಿಡ್ ಸೋಂಕು ತಗುಲಿ ಸಾಹಿತಿ ಚನ್ನವೀರ ಕಣವಿ ಅವರು ಕಳೆದ ಒಂದು ತಿಂಗಳಿನಿಂದ ಧಾರವಾಡದ SDM ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಜನವರಿ 14ರಂದು ಚನ್ನವೀರ ಕಣವಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆಯುಸಿರೆಳೆದಿದ್ದಾರೆ.ಚನ್ನವೀರ ಕಣವಿಯವರ ಶ್ವಾಸಕೋಶದಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿ, ಎದೆ ಭಾಗದಲ್ಲಿ ಹೆಚ್ಚಿನ ಸೋಂಕು ಹರಡಿತ್ತು. ಶ್ವಾಸಕೋಶ ಉಸಿರಾಟದ ಶಕ್ತಿ ಕಳೆದುಕೊಂಡಿತ್ತು.
ಸಾಹಿತಿ ಚೆನ್ನವೀರ ಕಣವಿ ಹಿನ್ನೆಲೆ…
ಕನ್ನಡದ ಸಮನ್ವಯ ಕವಿ, ಸುನೀತಗಳ ಸಾಮ್ರಾಟ್ ಎಂದು ಪ್ರಸಿದ್ಧರಾಗಿದ್ದ ಸಾಹಿತಿ ಚೆನ್ನವೀರ ಕಣವಿ ಇಂದು ಇಹಲೋಕ ತ್ಯಜಿಸಿದ್ದಾರೆ. ಚನ್ನವೀರ ಕಣವಿ ಅವರು, ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಸಕ್ಕರೆಪ್ಪ ಮತ್ತು ಪಾರ್ವತವ್ವ ದಂಪತಿಯ ಪುತ್ರರಾಗಿ ಜನಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂಎ ಪದವಿ ಪಡೆದಿದ್ದರು.
ಕಣವಿಯವರ ಪ್ರಸಿದ್ಧ ಕೃತಿಗಳು
*ಕಾವ್ಯ ಸಂಕಲನ: ಜೀವಧ್ವನಿ, ಕಾವ್ಯಾಕ್ಷಿ, ಭಾವಜೀವಿ, ಆಕಾಶಬುಟ್ಟಿ, ಹೊಂಬೆಳಕು, ಕಾರ್ತಿಕದ ಮೋಡ, ಮಧುಚಂದ್ರ, ಮಣ್ಣಿನ ಮೆರವಣಿಗೆ, ದಾರಿ ದೀಪ, ಎರಡು ದಡ, ಜೀನಿಯಾ, ಶಿಶಿರದಲ್ಲಿ ಬಂದ ಸ್ನೇಹಿತ
*ಪ್ರಬಂಧ ಸಂಕಲನ: ಸಾಹಿತ್ಯಚಿಂತನ, ಕಾವ್ಯಾನುಸಂಧಾನ, ಸಮಾಹಿತ, ಮಧುರಚೆನ್ನ, ಸಮತೋಲನ
*ಮಕ್ಕಳ ಕವಿತೆ: ಹಕ್ಕಿ ಪುಕ್ಕ, ಚಿಣ್ಣರ ಲೋಕವ ತೆರೆಯೋಣ
* ಸಂಪಾದನೆ: ಸಿದ್ಧಿ ವಿನಾಯಕ ಮೋದಕ, ಕನ್ನಡದ ಕಾಲು ಶತಮಾನ ಕವಿತೆಗಳು
*ಸಂಪಾದನೆ: ನವಿಲೂರು ಮನೆಯಿಂದ, ನವ್ಯಧ್ವನಿ, ನಮ್ಮೆಲ್ಲರ ನೆಹರೂ
ಚೆನ್ನವೀರ ಕಣವಿ ಪಡೆದ ಪ್ರಶಸ್ತಿಗಳು:
>ಜೀವಧ್ವನಿ ಕೃತಿಗೆ 1981ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
>1996ರಲ್ಲಿ ಹಾಸನದಲ್ಲಿ ನಡೆದ 65 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷ ಗೌರವ.
>2008ರ ಆಳ್ವಾಸ್ ನುಡಿಸಿರಿ ಸಮ್ಮೇಳನದ ಅಧ್ಯಕ್ಷ ಗೌರವ.
>ರಾಜ್ಯೋತ್ಸವ ಪ್ರಶಸ್ತಿ.
>ಪಂಪ ಪ್ರಶಸ್ತಿ.
>ಬಸವ ಗುರು ಕಾರುಣ್ಯ ಪ್ರಶಸ್ತಿ.
>ನಾಡೋಜ ಪ್ರಶಸ್ತಿ.
>ಕರ್ನಾಟಕ ಕವಿರತ್ನ ಪ್ರಶಸ್ತಿ.