ಬೆಂಗಳೂರು: ಜುಲೈ 30ರ ಒಳಗೆ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದ ಹಿನ್ನಲೆ, ಜುಲೈ ಎರಡನೇ ವಾರದಲ್ಲಿ ಫಲಿತಾಂಶ ಪ್ರಕಟ ಮಾಡಲಿದ್ದೇವೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.
ಯಾರಿಗೂ ಅನ್ಯಾಯವಾಗದ ರಿತಿಯಲ್ಲಿ ಫಲಿತಾಂಶ ಬರಲಿದೆ. ತಜ್ಞರು ಸೂಚಿಸಿದ ಮಾನದಂಡದ ಮೇಲೆ ಫಲಿತಾಂಶ ನೀಡಲಾಗುತ್ತದೆ. ಓಂದು ವೇಳೆ ಯಾವುದೇ ವಿದ್ಯಾರ್ಥಿಗೆ ಫಲಿತಾಂಶ ತೃಪ್ತಿಯಾಗದೇ ಇದ್ದಲ್ಲಿ, ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಶಿಕ್ಷಕ ಸ್ನೇಹಿ ವರ್ಗಾವಣಾ ನೀತಿ ಅಧಿಸೂಚನೆ ಜೂನ್ 30ರಂದು ಪ್ರಕಟವಾಗಲಿದ್ದು, ಅಂದಿನಿಂದಲೇ ಪ್ರಕ್ರಿಯೆ ಆರಂಭವಾಗಲಿದೆ. ಈ ಬಾರಿ ವಲಯ, ಹೆಚ್ಚುವರಿ ವರ್ಗಾವಣೆಗೆ ಅವಕಾಶವಿಲ್ಲ. ಈಗಾಗಲೇ 75,000 ಶಿಕ್ಷಕರು ಅರ್ಜಿ ಸಲ್ಲಿಸಿದ್ದು, ಶಿಕ್ಷಕ ಮಿತ್ರ ಆಪ್ ನಲ್ಲಿ ಕೌನ್ಸೆಲಿಂಗ್ ನಡೆಯಲಿದೆ ಸಚಿವರು ತಿಳಿಸಿದ್ದಾರೆ.
ಇನ್ನು, ಕೋವಿಡ್ ಕಾರಣದಿಂದ ಈ ಬಾರಿ ರಾಜ್ಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಲಾಗಿದ್ದು, ವಿದ್ಯಾರ್ಥಿಗಳು ಪ್ರಥಮ ಪಿಯುಸಿ ಮತ್ತು ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ ಫಲಿತಾಂಶ ಪ್ರಕಟಿಸಲಾಗುತ್ತದೆ.