ಜಗಳೂರು: ಉಸಿರಾಟ ತೊಂದರೆಯಿಂದ ನರಳುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮದ್ಯದಲ್ಲಿಯೇ ಸಾವನ್ನಪ್ಪಿದ್ದು ವಾಹನ ಚಾಲಕ ಶವವನ್ನು ನಡು ರಸ್ತೆಯಲ್ಲಿಯೇ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಇಂದು ದಾವಣಗೆರೆ ಜಿಲ್ಲೆಯಲ್ಲಿ ಜಗಳೂರು ತಾಲೂಕಿನ ಚಿಕ್ಕಮ್ಮನಹಟ್ಟಿ ಸಮೀಪದಲ್ಲಿ ಇಂದು ನಡೆದಿದೆ.
ತಾಲೂಕಿನ ಚಿಕ್ಕ ಉಜ್ಜಯಿನಿ ಗ್ರಾಮದ ಕೆಂಚಮ್ಮ(38) ಮೃತ ಮಹಿಳೆಯಾಗಿದ್ದು, ಕಳೆದೆರಡು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದು, ಇಂದು ತುಂಬ ಉಸಿರಾಟದ ಕಾಣಿಸಿಕೊಂಡಿದ್ದು, ಕೂಡಲೇ ಆಕೆಯನ್ನು ತನ್ನ ಮಗಳು ಮತ್ತು ಸಂಬಂಧಿಕರು ಸೇರಿ ಓಮ್ನಿ ವಾಹನದಲ್ಲಿ ಜಗಳೂರಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗದ ಚಿಕ್ಕಮ್ಮನಹಟ್ಟಿ ಕ್ರಾಸ್ ಬಳಿ ಮಹಿಳೆ ಮೃತಪಟ್ಟಿದ್ದಾಳೆ.
ಇದನ್ನು ತಿಳಿದ ಓಮ್ನಿ ಚಾಲಕ ಅವರನ್ನು ಆಸ್ಪತ್ರೆ ಅಥವಾ ಮನೆಗೆ ವಾಪಸ್ಸು ಕರೆದುಕೊಂಡು ಹೋಗುವ ಬದಲು ನಡು ರಸ್ತೆಯಲ್ಲೇ ಶವವನ್ನು ಇಳಿಸಿ ಬಿಟ್ಟು ಹೋಗಿದ್ದಾನೆ. ಈಗ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರಿಂದ ಸಾರ್ವಜನಿಕರು ಚಾಲಕನು ಮಾಡಿದ ಕೆಲಸಕ್ಕೆ ಹಿಡಿಶಾಪ ಹಾಕಿದ್ದಾರೆ.
ಅನಾಥವಾದ ತಾಯಿಯ ಶವವನ್ನು ಕಂಡು ಮುಗಿಲು ಮುಟ್ಟಿದ ಮಗಳ ಆಕ್ರಂದನ:
ಇನ್ನು, ತನ್ನ ತಾಯಿ ಮೃತಪಟ್ಟಿದ್ದಕ್ಕಿಂತ ಹೆಚ್ಚಾಗಿ ಶವವನ್ನು ಅನಾಥವಾಗಿ ಬಿಟ್ಟು ಹೋಗಿದ್ದಕ್ಕೆ ಮಗಳಿಗೆ ದುಃಖ ತಡೆಯಲಾರದೆ ರಸ್ತೆಯಲ್ಲಿ ಸಂಚರಿಸುವ ಸವಾರರಿಗೆ ಬನ್ನಿ ನನ್ನ ಅಮ್ಮನನ್ನು ಉಳಿಸಿಕೊಡಿ ಎಂದು ಗೋಗೊರೆಯುತ್ತಿದ್ದನ್ನು ಅಯ್ಯೋ ಅನಿಸಿತು. ಇನ್ನು, ತನ್ನ ತಾಯಿಯನ್ನು ಉಳಿಸಿಕೊಳ್ಳಲಾಗಲಿಲ್ಲವೆಂದು ಮಗಳು ನೆಲಕ್ಕೆ ಹಣೆ ಕುಟ್ಟಿಕೊಳ್ಳುತ್ತಿದ್ದ ದೃಶ್ಯ ಎಲ್ಲರ ಕಣ್ಣಂಚಲಿ ನೀರು ತರಿಸಿತು. ನಂತರ ಕುಟುಂಬಸ್ಥರು ಬಂದು ಶವವನ್ನು ತೆಗೆದುಕೊಂಡು ಹೋಗಿ ತಮ್ಮ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದಾರೆ.