ಬೆಂಗಳೂರು : ರಾಜ್ಯದಲ್ಲಿ ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಿರುವ ಬೆನ್ನಲ್ಲೇ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಬೋರ್ಡ್ ಪರೀಕ್ಷೆಗಳ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದು, ಮೇ ಎರಡನೇ ವಾರದಿಂದ ದ್ವಿತೀಯ ಪಿಯುಸಿ ಮತ್ತು ಜೂನ್ ಮೊದಲ ವಾರದಿಂದ ಎಸ್ ಎಸ್ ಎಲ್ ಸಿ ತರಗತಿಯ ಪರೀಕ್ಷೆಗಳು ನಡೆಸಲಾಗುವದು ಎಂದು ತಿಳಿಸಿದ್ದಾರೆ.
ಪರೀಕ್ಷಾ ದೃಷ್ಟಿಯಿಂದ ಬೋಧನೆ ಮತ್ತು ಕಲಿಕೆಗಾಗಿ ಗುರುತಿಸಿರುವ ವಿಷಯಗಳ ಬಗ್ಗೆ ಶಿಕ್ಷಣ ಇಲಾಖೆ ಅಂತಿಮಗೊಳಿಸಿದ್ದು, ವಿದ್ಯಾರ್ಥಿಗಳಿಗೆ ಹೊರೆಯಾಗದ ರೀತಿಯಲ್ಲಿ ಕನಿಷ್ಟ ಕಲಿಕೆಗೆ ಬೋಧಿಸಬೇಕಿರುವ ಪಠ್ಯಗಳನ್ನಷ್ಟೇ ಪರಿಗಣಿಸಲಾಗಿದೆ ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.
1ರಿಂದ 9ನೇ ತರಗತಿ ಪಠ್ಯ ಕಡಿತ ಇಲ್ಲ; ಶಿಕ್ಷಣ ಸಚಿವ
ಇನ್ನೂ 1 ರಿಂದ 9ನೇ ತರಗತಿಯವಗೆ ಪಠ್ಯ ಪುಸ್ತಕದಲ್ಲಿ ಯಾವುದೇ ಕಡಿತ ಮಾಡುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಶಿಕ್ಷಣ ಸಚಿವರು, ‘1 ರಿಂದ 9 ನೇ ತರಗತಿಯ ವರೆಗೆ ಯಾವುದೇ ಪಠ್ಯ ಕಡಿತ ಮಾಡುವುದಿಲ್ಲ, ಈ ಬಗ್ಗೆ ಪರ್ಯಾಯ ಶೈಕ್ಷಣಿಕ ವೇಳಾಪಟ್ಟಿ ಸಿದ್ಧಪಡಿಸಲಾಗುವುದು. ‘1 ರಿಂದ 9 ನೇ ತರಗತಿಗಳಿಗೆ ಪಠ್ಯ ಕಡಿತದ ಪ್ರಸ್ತಾಪ ಶಿಕ್ಷಣ ಇಲಾಖೆಯ ಮುಂದಿಲ್ಲ. ಈ ತರಗತಿಗಳಿಗೆ ಶಾಲಾ ಹಂತದಲ್ಲಿ ಮೌಲ್ಯ ಮಾಪನ ನಡೆಸುವುದರಿಂದ ಮಕ್ಕಳ ಕಲಿಕಾ ಸಾಮರ್ಥ್ಯದ ಆಧಾರದಲ್ಲಿ ಮೌಲ್ಯಮಾಪನ ಜಾರಿಯಲ್ಲಿರಲಿದೆ’ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.