ನೆಗಡಿಗೆ ಇಲ್ಲಿದೆ ಸಿಂಪಲ್ ಮನೆ ಔಷಧಿ:
1. ಅರಸಿನದ ಪುಡಿ 1 ಚಮಚ, 10-20 ಮೆಣಸಿನ ಕಾಳು, 4 ಗ್ರಾಂ ಅಮೃತ ಬಳ್ಳಿ ತೆಗೆದುಕೊಂಡು, 4 ಲೋಟ ನೀರಿಗೆ ಜಜ್ಜಿ ಹಾಕಿ, ಚೆನ್ನಾಗಿ ಕುದಿಸಿ. 1 ಲೋಟಕ್ಕೆ ಕಷಾಯ ಬತ್ತಿಸಿ, ಸಿಹಿಗೆ ತಕ್ಕಷ್ಟು ಬೆಲ್ಲ ಸೇರಿಸಿ, ಬೆಳಿಗ್ಗೆ ಹಾಗೂ ರಾತ್ರಿ ಸೇವಿಸಿದರೆ (ಹಾಲು ಸೇರಿಸಬಾರದು) ನೆಗಡಿ ಕಮ್ಮಿಯಾಗುವುದು.
ಧ್ವನಿ ತುಂಬಾ ಒಡಕಾಗಿದ್ದರೆ, ಗಂಟಲು ಕೆರೆತವಿದ್ದರೆ, ಕೆಮ್ಮು ಬರುತ್ತಿದ್ದರೆ, ಜೇಷ್ಠ ಮಧು, ಕಲ್ಲುಸಕ್ಕರೆ, ಹಸಿ ಶುಂಠಿ, ಇವುಗಳನ್ನು ಬಾಯಿಯಲ್ಲಿ ಹಾಕಿಕೊಂಡು ಜಗಿದು ರಸ ನುಂಗುತ್ತಿರಬೇಕು. ಇದರಿಂದ ಗಂಟಲು ಕೆರೆತ, ಕೆಮ್ಮು ನಿವಾರಣೆಯಾಗುವುದು. ಇದಲ್ಲದೆ ಮೇಲೆ ತಿಳಿಸಿದ ಸಾಮಾನುಗಳನ್ನು ಕಷಾಯ ಮಾಡಿ ಕುಡಿದರೂ ಸಹಾ ಇದೇ ಪರಿಣಾಮ ಉಂಟಾಗುವುದು.
2. ಆಹಾರವನ್ನು ಮಿತವಾಗಿ ಸೇವಿಸಿ ಮಧ್ಯೆ ಮಧ್ಯೆ ಬಿಸಿ ನೀರಿಗೆ ಲಿಂಬೆರಸವನ್ನು ಹಾಕಿ ಕುಡಿಯುತ್ತಿದ್ದರೆ ನೆಗಡಿ ಪರಿಹಾರವಾಗುವುದು.
3. ಹುರುಳಿ 2 ತೊಲ, ನೆಲ್ಲಿಚಟ್ಟು 1/2 ತೊಲ, ಹಿಪ್ಪಲಿ 1/2 ತೊಲ ಎಲ್ಲವನ್ನೂ ಕುಟ್ಟಿ ಈ ಚೂರ್ಣವನ್ನು 2 ಚಮಚ ಹಾಕಿ ಕಷಾಯ ಮಾಡಿ ದಿನಕ್ಕೆ 3 ಸಲದಂತೆ 3 ದಿನ ಸೇವಿಸಿದರೆ ಸತತ ನೀರು ಸುರಿಯುವ ನೆಗಡಿ ಪರಿಹಾರವಾಗುವುದು.
4. ಒಣಗಿದ ತುಂಬೆ ಸೊಪ್ಪಿನ ಚೂರ್ಣ 2 ತೋಲ, ಜೇಷ್ಟಮಧು 2 ತೊಲ ಇವೆರಡನ್ನು ಚೂರ್ಣಿಸಿ 1 ಲೋಟ ನೀರಿನಲ್ಲಿ ಹಾಕಿ ಕಷಾಯಕ್ಕಿಟ್ಟು, 1/2 ಲೋಟಕ್ಕೆ ಇಳಿಸಿ 1 ಚಮಚ ಕಲ್ಲುಸಕ್ಕರೆ ಪುಡಿ ಸೇರಿಸಿ ನಿತ್ಯ 2 ಹೊತ್ತು 2-3 ದಿನ ಸೇವಿಸಬೇಕು.
5. ನೆಗಡಿಯಾಗಿ ಮೂಗಿನಲ್ಲಿ ನೀರಿಳಿಯುವುದು ಹಾಗೂ ಸೀನು ಬರುತ್ತಿದ್ದರೆ ಅರಸಿನದ ಬೇರು, ಅಮೃತಬಳ್ಳಿ, ಕಾಳುಮೆಣಸು ಎಲ್ಲವನ್ನು ಸಮತೂಕದಲ್ಲಿ ಸೇರಿಸಿ, ಜಜ್ಜಿ 4 ಲೋಟ ನೀರು ಹಾಕಿ ಕಷಾಯ ಮಾಡಿ 1 ಲೋಟಕ್ಕೆ ಬತ್ತಿಸಿ ಬೆಳಿಗ್ಗೆ ರಾತ್ರಿ 1/2, 1/2 ಲೋಟಕ್ಕೆ ಹಾಲು ಸಕ್ಕರೆ ಬೆರೆಸಿ ಬಿಸಿ ಬಿಸಿಯಾಗಿ ಗಂಟಲಿಗೆ ಹಾಯೆನಿಸುವಂತೆ ಕುಡಿಯಬೇಕು.
6. ಯಾವಾಗಲೂ ಪದೇಪದೆ ನೆಗಡಿಯಾಗಿ ತಲೆ ಭಾರ ಮತ್ತು ಮಲಬದ್ಧತೆಯಾದರೆ, ಅರಸಿನ 1 ಚಮಚ, ಕಾಳುಮೆಣಸು 1 ಚಮಚ, ಜೇಷ್ಟಮಧು 1 ಬೇರು ಎಲ್ಲವನ್ನೂ ಜಜ್ಜಿ ಹಾಕಿ
ಬೆಲ್ಲವನ್ನು ಸೇರಿಸಿ ಕಷಾಯ ತಯಾರಿಸಿ ಹಾಲು ಹಾಕಿ. ಬಿಸಿ ಬಿಸಿಯಾಗಿ ದಿನಾ 2 ವೇಳೆ 3 ರಿಂದ 4 ದಿನ ಕುಡಿಯಬೇಕು.
7. ತುಳಸಿ ಎಲೆಗಳನ್ನು ಒಣಗಿಸಿ, ವಸಗಾಲಿತ ಹುಡಿಮಾಡಿ ನೆಗಡಿಯಾದಾಗ ನಶ್ಯದಂತೆ ಸೇದಿದರೆ ನೆಗಡಿ ತಾನಾಗಿ ಹೋಗುತ್ತದೆ.
ಇದನ್ನು ಓದಿ: ರಕ್ತದ ಒತ್ತಡಕ್ಕೆ ಇಲ್ಲಿದೆ ಉತ್ತಮ ಮನೆ ಔಷಧಿ