ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 2026-27ನೇ ಸಾಲಿನ ಬಜೆಟ್ನಲ್ಲಿ ಅನ್ನದಾತನಿಗೆ ಭರ್ಜರಿ ಸಿಹಿಸುದ್ದಿ ನೀಡಲಾಗಿದೆ. ಕೃಷಿ ಉತ್ಪಾದನೆ ಹೆಚ್ಚಳ, ಮಣ್ಣಿನ ಆರೋಗ್ಯ ರಕ್ಷಣೆ ಮತ್ತು ಆಧುನಿಕ ತಂತ್ರಜ್ಞಾನದ ಬಳಕೆಗೆ ಒತ್ತು ನೀಡುವ ಮೂಲಕ ರೈತರ ಆರ್ಥಿಕ ಪ್ರಗತಿಗೆ ಪೂರಕವಾದ ಹಲವು ಹೊಸ ಯೋಜನೆಗಳನ್ನು ಸಿಎಂ ಘೋಷಿಸಿದ್ದಾರೆ.
- ಸಿರಿಧಾನ್ಯ ಉತ್ಪನ್ನ ಉತ್ತೇಜನಕ್ಕಾಗಿ ಪ್ರತ್ಯೇಕ ‘ಮಿಲೆಟ್ ಹಬ್’ ನಿರ್ಮಾಣ.
- ₹100 ಕೋಟಿ ವೆಚ್ಚದಲ್ಲಿ ‘ಸಿಎಂ ಕೃಷಿ ವಿಸ್ತಾರ ಯೋಜನೆ’ ಜಾರಿ.
- ಮಣ್ಣಿನ ಗುಣಮಟ್ಟ ಹೆಚ್ಚಿಸಲು ‘ವಸುಧಾಮೃತ’ ಯೋಜನೆ ಜಾರಿ.
- AI ತಂತ್ರಜ್ಞಾನ ಆಧಾರಿತ ‘ರೈತ ಕರೆ ಕೇಂದ್ರ’ ಸ್ಥಾಪನೆ.
ಮಣ್ಣಿನ ಆರೋಗ್ಯಕ್ಕೆ ‘ವಸುಧಾಮೃತ’ ಭಾಗ್ಯ
ಕೃಷಿ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿರುವುದನ್ನು ತಡೆಯಲು ಸರ್ಕಾರ ‘ವಸುಧಾಮೃತ’ ಎಂಬ ವಿನೂತನ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯಡಿ ಮಣ್ಣಿನ ಗುಣಮಟ್ಟ ಹೆಚ್ಚಿಸಲು ಮತ್ತು ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಲು ರೈತರಿಗೆ ನೆರವು ನೀಡಲಾಗುತ್ತದೆ. ಮುಂದಿನ 3 ವರ್ಷಗಳಲ್ಲಿ ಗಿಡ-ಮರಗಳ ರಕ್ಷಣೆಗಾಗಿ ‘ಸಸ್ಯ ಸಂಜೀವಿನಿ’ ಯೋಜನೆ ಕೂಡ ಜಾರಿಯಾಗಲಿದೆ.
AI ತಂತ್ರಜ್ಞಾನದ ‘ರೈತ ಕರೆ ಕೇಂದ್ರ’
ಕೃಷಿ ಮಾಹಿತಿಯನ್ನು ಬೆರಳ ತುದಿಯಲ್ಲೇ ನೀಡಲು ಸರ್ಕಾರ ಮುಂದಾಗಿದೆ. ಕೃತಕ ಬುದ್ಧಿಮತ್ತೆ (Artificial Intelligence) ಆಧಾರಿತ ‘ರೈತ ಕರೆ ಕೇಂದ್ರ’ಗಳನ್ನು ಸ್ಥಾಪಿಸುವುದಾಗಿ ಸಿಎಂ ತಿಳಿಸಿದ್ದಾರೆ. ಇದರ ಮೂಲಕ ರೈತರು ಬೆಳೆ ಹಾನಿ, ಹವಾಮಾನ ಮತ್ತು ಮಾರುಕಟ್ಟೆ ದರಗಳ ಬಗ್ಗೆ ಕ್ಷಣಾರ್ಧದಲ್ಲಿ ಮಾಹಿತಿ ಪಡೆಯಬಹುದಾಗಿದೆ.
ಚಿತ್ರದುರ್ಗದ ರೈತರಿಗೆ ಗುಡ್ ನ್ಯೂಸ್
ಮಧ್ಯಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ರೈತರಿಗೆ ಬಜೆಟ್ನಲ್ಲಿ ವಿಶೇಷ ಕೊಡುಗೆ ಸಿಕ್ಕಿದೆ. ಚಿತ್ರದುರ್ಗದಲ್ಲಿರುವ ಕೃಷಿ ಉದ್ದಿಮೆ ತರಬೇತಿ ಕೇಂದ್ರವನ್ನು ಅಂತರಾಷ್ಟಯ ಮಟ್ಟಕ್ಕೆ ಉನ್ನತೀಕರಣಗೊಳಿಸುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇದರಿಂದ ಸ್ಥಳೀಯವಾಗಿ ಕೃಷಿ ಆಧಾರಿತ ಉದ್ಯಮಗಳು ಹೆಚ್ಚಾಗಲಿವೆ.




