New change in bank recruitment । ದಕ್ಷಿಣ ಭಾರತದ ರಾಜ್ಯಗಳಲ್ಲಿ ಬ್ಯಾಂಕಿಂಗ್ ಸೇವೆಗಳ ವೇಳೆ ಭಾಷಾ ಅಡೆತಡೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಸೂಚನೆ ನೀಡಿದ್ದಾರೆ.
ಹೌದು, ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಬ್ಯಾಂಕ್ ಸಿಬ್ಬಂದಿ ಸ್ಥಳೀಯ ಭಾಷೆ ಮಾತನಾಡದಿರುವುದು ಗ್ರಾಹಕರಲ್ಲಿ ಅಸಮಾಧಾನ, ಗೊಂದಲ ಹಾಗೂ ವಾಗ್ವಾದಕ್ಕೂ ಕಾರಣವಾಗಿದೆ. ಇದರಿ೦ದ ಸೇವೆಯ ಗುಣಮಟ್ಟ ಕುಸಿಯುವ ಜೊತೆಗೆ ಗ್ರಾಹಕ-ಸಿಬ್ಬಂದಿ ನಂಬಿಕೆಗೂ ಧಕ್ಕೆಯಾಗುತ್ತಿದೆ.
ಸ್ಥಳೀಯ ಭಾಷೆ ತಿಳಿದವರ ನೇಮಕಾತಿ ಕಡ್ಡಾಯ!
ಎಸ್ಬಿಐ ಆಯೋಜಿಸಿದ್ದ 12ನೇ ಬ್ಯಾಂಕಿಂಗ್ ಮತ್ತು ಅರ್ಥಶಾಸ್ತ್ರ ಸಮಾವೇಶದಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, “ಬ್ಯಾಂಕ್ಗಳು ಸ್ಥಳೀಯ ಭಾಷೆ ತಿಳಿದವರನ್ನೇ ಶಾಖೆಗಳ ಹುದ್ದೆಗೆ ನೇಮಕ ಮಾಡಬೇಕು” ಎ೦ದು ಸ್ಪಷ್ಟ ನಿರ್ದೇಶನ ನೀಡಿದರು. ಶಾಖಾ ಮಟ್ಟದಲ್ಲಿ ಗ್ರಾಹಕರೊಂದಿಗೆ ನೇರ ಸಂಪರ್ಕ ಹೊಂದುವ ಅಧಿಕಾರಿಗಳಿಗೆ ಸ್ಥಳೀಯ ಭಾಷೆಯ ಜ್ಞಾನ ಕಡ್ಡಾಯವಾಗಬೇಕು ಎ೦ದು ಅವರು ಹೇಳಿದರು. ಬ್ಯಾಂಕ್ಗಳ ಮಾನವ ಸಂಪನ್ಮೂಲ ನೀತಿಗಳಲ್ಲೂ ಇದರ ಅನ್ವಯ ಬದಲಾವಣೆ ಅಗತ್ಯವಿದೆ ಎ೦ದು ಸಲಹೆ ನೀಡಿದರು.
ಬ್ಯಾಂಕಿಂಗ್ ಬೆಳವಣಿಗೆಗೆ ಭಾಷೆಯ ಮಹತ್ವ
ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಾರ, ಬ್ಯಾಂಕಿಂಗ್ ಕ್ಷೇತ್ರದ ನಿಜವಾದ ಬೆಳವಣಿಗೆ ಗ್ರಾಹಕರ ವಿಶ್ವಾಸದಿಂದ ಸಾಧ್ಯ. ಸ್ಥಳೀಯ ಗ್ರಾಹಕರ ಜೊತೆ ನಿಕಟ ಸಂಪರ್ಕ ಸಾಧಿಸಲು ಭಾಷೆಯು ಪ್ರಮುಖ ಪಾತ್ರ ವಹಿಸುತ್ತದೆ.
ತಂತ್ರಜ್ಞಾನದಿಂದ ಬ್ಯಾಂಕಿಂಗ್ ಸುಲಭವಾದರೂ, ಸಂಪೂರ್ಣವಾಗಿ ಯಂತ್ರದ ಮೇಲೆ ಅವಲಂಬಿಸದಂತೆ ಅವರು ಎಚ್ಚರಿಸಿದರು. ‘ಕೇವಲ ಆ್ಯಪ್ ಅಥವಾ ಯಂತ್ರಗಳ ಮೂಲಕವಲ್ಲ, ಮಾನವೀಯ ಸಂವಹನವೇ ಬ್ಯಾಂಕಿಂಗ್ನ ಹೃದಯ’ ಎಂದರು.
ಮಾತೃಭಾಷೆಯ ಶಕ್ತಿ: ವಿಶ್ವಾಸದ ಸೇತುವೆ
ಸೀತಾರಾಮನ್ ಅವರ ಮಾತಿನಲ್ಲಿ ಸ್ಪಷ್ಟತೆ ಇದೆ. ಗ್ರಾಹಕರು ಹಿಂದಿ ಅಥವಾ ಇಂಗ್ಲಿಷ್ ಬಲ್ಲವರಾದರೂ, ತಮ್ಮ ಮಾತೃಭಾಷೆಯಲ್ಲಿ ಮಾತನಾಡಿದಾಗ ಅವರು ಹೆಚ್ಚು ಆರಾಮ ಮತ್ತು ವಿಶ್ವಾಸದಿಂದ ಇರುತ್ತಾರೆ. ಸ್ಥಳೀಯ ಭಾಷೆಯ ಸಂವಹನ ಗ್ರಾಹಕರ ಮನಸ್ಸಿನಲ್ಲಿ ಬ್ಯಾಂಕ್ಗಳತ್ತ ಭದ್ರತೆ ಮತ್ತು ನಂಬಿಕೆ ಮೂಡಿಸುತ್ತದೆ. ಈ ನಿಟ್ಟಿನಲ್ಲಿ, ಬ್ಯಾಂಕ್ ಸಿಬ್ಬಂದಿ ಸ್ಥಳೀಯ ಭಾಷೆಯಲ್ಲಿ ಮಾತನಾಡುವಂತೆ ತರಬೇತಿಗೂ ಆದ್ಯತೆ ನೀಡಬೇಕೆಂದು ಅವರು ಸೂಚಿಸಿದರು.
ದಕ್ಷಿಣ ರಾಜ್ಯಗಳ ಅಸಮಾಧಾನಕ್ಕೆ ಪರಿಹಾರದ ದಾರಿ
ಕಳೆದ ಕೆಲವು ವರ್ಷಗಳಿಂದ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಅನ್ಯಭಾಷಿಕ ಬ್ಯಾಂಕ್ ಸಿಬ್ಬಂದಿಯ ವಿರುದ್ಧ ಅಸಮಾಧಾನ ಹೆಚ್ಚಾಗಿತ್ತು. ಹಲವೆಡೆ ಪ್ರತಿಭಟನೆಗಳೂ ನಡೆದವು. ಈ ಹಿನ್ನೆಲೆಯಲ್ಲಿ ಹಣಕಾಸು ಸಚಿವೆಯ ಈ ಹೇಳಿಕೆ ಸ್ಥಳೀಯ ಭಾಷಾ ಹಕ್ಕುಗಳ ಪರ ಬಲವಾದ ಹೆಜ್ಜೆಯಾಗಿದೆ. ಇದೀಗ ಬ್ಯಾಂಕ್ ನೇಮಕಾತಿಯಲ್ಲಿ ಸ್ಥಳೀಯ ಭಾಷೆಗೆ ಮಹತ್ವ ನೀಡುವ ಮೂಲಕ, ಗ್ರಾಹಕರ ಅನುಭವ ಮತ್ತು ಬ್ಯಾಂಕಿಂಗ್ ಸೇವೆಯ ಗುಣಮಟ್ಟ ಎರಡೂ ಹೊಸ ಹಂತಕ್ಕೇರುತ್ತವೆ ಎ೦ಬ ನಿರೀಕ್ಷೆ ಮೂಡಿದೆ.




